ಬೆಂಗಳೂರು : ರಾಜ್ಯದಲ್ಲಿ ಆರ್ಎಸ್ಎಸ್ ಸಭೆಯ ಬಳಿಕ ಅನಾಹುತ ಸಂಭವಿಸಬಹುದು ಎಂಬ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೀಡಿದ್ದ ಪ್ರತಿಕ್ರಿಯೆಗೆ ಹರಿಪ್ರಸಾದ್ ತೀವ್ರ ತಿರುಗೇಟು ನೀಡಿದ್ದಾರೆ.
ಪ್ರಲ್ಹಾದ್ ಜೋಶಿ ಅವರು ತಮ್ಮ ವಿರುದ್ಧ ಗೂಂಡಾಗಿರಿ ಅನುಭವದಿಂದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಅವರು, ಸಾರ್ವಜನಿಕವಾಗಿ ಮಾತನಾಡುವ ಭಾಷೆ ಮತ್ತು ಶಿಷ್ಟಾಚಾರದ ಬಗ್ಗೆ ಮೊದಲು ತಮ್ಮ ಪಕ್ಷದ ನಾಯಕರಿಗೆ ಪಾಠ ಮಾಡಲಿ ಎಂದು ಟೀಕಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, “Basic Etiquettes ಬಗ್ಗೆ ಮಾತನಾಡುವವರು ತಮ್ಮದೇ ಪಕ್ಷದ ನಾಯಕರ ಹೇಳಿಕೆಗಳತ್ತ ಮೊದಲು ಗಮನ ಹರಿಸಬೇಕು. ಬಿಜೆಪಿ ಸಂಸ್ಕೃತಿಯ ‘ಜೀ ಹುಜೂರು’ ಪದ್ಧತಿಯನ್ನು ನನ್ನಿಂದ ನಿರೀಕ್ಷಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರಲ್ಹಾದ್ ಜೋಶಿ ಅವರ ಕುಟುಂಬದ ವಿಚಾರಗಳನ್ನು ಪ್ರಸ್ತಾಪಿಸಿದ ಹರಿಪ್ರಸಾದ್, ಮೂಲಭೂತ ಶಿಷ್ಟಾಚಾರದ ಬಗ್ಗೆ ಮಾತನಾಡುವವರು ತಮ್ಮ ಸುತ್ತಮುತ್ತಲಿನ ಬೆಳವಣಿಗೆಗಳ ಬಗ್ಗೆಯೂ ಮಾತನಾಡಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಆರ್ಎಸ್ಎಸ್ ಬಗ್ಗೆ ಬಹುಸಂಖ್ಯಾತರ ಬೆಂಬಲವಿದೆ ಎಂಬ ಜೋಶಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಬಹುಸಂಖ್ಯಾತರ ಭಾವನೆಗಳನ್ನು ರಾಜಕೀಯವಾಗಿ ಬಳಸಿಕೊಂಡು ಅಧಿಕಾರ ಪಡೆಯುವುದು ಕೆಲವರ ತಂತ್ರವಾಗಿದೆ” ಎಂದು ಆರೋಪಿಸಿದರು. ತಮ್ಮ ವಿರುದ್ಧದ ಗೂಂಡಾಗಿರಿ ಆರೋಪಕ್ಕೂ ಸ್ಪಷ್ಟನೆ ನೀಡಿದ ಹರಿಪ್ರಸಾದ್, ನಾನು ಹಿಂದುತ್ವ ಅಥವಾ ಜಾತಿಯ ಹೆಸರಿನಲ್ಲಿ ಯಾವುದೇ ಗೂಂಡಾಗಿರಿ ಮಾಡಿಲ್ಲ. ಜಾತ್ಯಾತೀತತೆ ಮತ್ತು ಸಂವಿಧಾನ ರಕ್ಷಣೆಗಾಗಿ ನಡೆದ ಹೋರಾಟಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಹೊರತುಪಡಿಸಿ ನನ್ನ ವಿರುದ್ಧ ಬೇರೆ ಪ್ರಕರಣಗಳಿಲ್ಲ ಎಂದು ಹೇಳಿದ್ದಾರೆ.
ತಾವು ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಪರ ಹೋರಾಟದ ಮೂಲಕ ರಾಜಕೀಯ ಮಾಡುತ್ತಿದ್ದೇನೆ ಎಂದು ಹೇಳಿದ ಅವರು, ಸಮಾಜವನ್ನು ಧರ್ಮ, ಜಾತಿ ಮತ್ತು ದ್ವೇಷದ ಆಧಾರದಲ್ಲಿ ವಿಭಜಿಸುವ ರಾಜಕಾರಣವೇ ನಿಜವಾದ ಸೈದ್ಧಾಂತಿಕ ಗೂಂಡಾಗಿರಿ ಎಂದು ಪ್ರಲ್ಹಾದ್ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದರು.



