ತುಮಕೂರು: ಗಾಂಜಾ ಗಿಡವನ್ನು ಜಮೀನುಗಳಲ್ಲೋ ಅಥವಾ ಅಜ್ಞಾತ ಸ್ಥಳಗಳಲ್ಲಿ ಬೆಳೆಯುವುದನ್ನು ನೋಡಿದ್ದೇವೆ. ಆದರೆ ತುಮಕೂರು ನಗರದಲ್ಲೇ ಗಾಂಜಾ ಗಿಡ ಬೆಳೆಯಲಾಗಿದೆ. ಅದೂ ತುಮಕೂರು ನಗರದ ಪ್ರಮುಖ ಬಡಾವಣೆಯೊಂದರಲ್ಲಿ. ಖಾಲಿ ನಿವೇಶನದಲ್ಲಿ ಬೆಳೆದಿದ್ದ ಗಾಂಜಾ ಗಿಡವನ್ನು ತುಮಕೂರಿನ ಜಯನಗರ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದನ್ನು ಗಂಭೀರವಾಗಿಯೇ ಸ್ವೀಕರಿಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ನಗರದ ದೇವರಾಜ ಅರಸು ರಸ್ತೆಯ ಸರಸ್ವತಿಪುರಂನ ೫ನೇ ಕ್ರಾಸ್ನಲ್ಲಿರುವ ಖಾಲಿ ನಿವೇಶನದಲ್ಲಿ ಗಾಂಜಾ ಗಿಡ ಬೆಳೆದಿದೆ ಎಂಬ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ, ಅಡಿಷನಲ್ ಎಸ್ಪಿ ವಿ.ಮರಿಯಪ್ಪ ಮಾರ್ಗದರ್ಶನದಲ್ಲಿ ನಗರ ಡಿವೈಎಸ್ಪಿ ಚಂದ್ರಶೇಖರ್ ಹಾಗೂ ತಿಲಕ್ ಪಾರ್ಕ್ ಸಿಪಿಐ ಪುರುಷೋತ್ತಮ್ ನೇತೃತ್ವದಲ್ಲಿ ಜಯನಗರ ಸಬ್ ಇನ್ಸ್ಪೆಕ್ಟರ್ ಹೆಚ್.ಎನ್.ಮಹಾಲಕ್ಷ್ಮಮ್ಮ, ಪಿಎಸ್ಐ-೨ ಹನುಮಂತರಾಯಪ್ಪ ಮತ್ತು ಸಿಬ್ಬಂದಿ ಸುರೇಶ್ ಖಾಲಿ ನಿವೇಶನಕ್ಕೆ ಭೇಟಿ ನೀಡಿ ಅಲ್ಲಿ ಬೆಳೆದಿದ್ದ ಗಾಂಜಾ ಗಿಡ ಕಟಾವು ಮಾಡಿಸಿ ವಶಕ್ಕೆ ಪಡೆದಿದ್ದಾರೆ.