ರಾಮನಗರ: ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿದ್ದು ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಪ್ರಚಾರಕ್ಕಾಗಿ ವೆಚ್ಚ ಮಾಡುವ ಹಣದ ಬಗ್ಗೆ ಪ್ರತಿ ದಿನ ನಿಗಾವಹಿಸಿ, ಸಭೆ, ಸಮಾರಂಭ, ವಾಹನಗಳ ತಪಾಸಣೆ, ಬ್ಯಾಂಕ್ ವಹಿವಾಟುಗಳ ಬಗ್ಗೆ ನಿಗಾ ವಹಿಸುವಂತೆ ಚುನಾವಣಾ ವೆಚ್ಚ ವೀಕ್ಷಕರಾದ ಬಿ. ಜಯರಾಗವನ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಲೆಕ್ಕ ಪರಿವೀಕ್ಷಕರು , ಲೆಕ್ಕಾಧಿಕಾರಿಗಳನ್ನು ಉದ್ದೇಶಿಸಿ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚುನಾವಣಾ ಕೆಲಸಕ್ಕಾಗಿ ನೇಮಕವಾಗಿರುವ ಎಫ್.ಎಸ್.ಟಿ, ಎಸ್.ಎಸ್.ಟಿ, ವಿವಿಟಿ ಹಾಗೂ ಇನ್ನಿತರ ತಂಡಗಳನ್ನು ಸಂಪರ್ಕಿಸಿ ಅಭ್ಯರ್ಥಿಯ ಚುನವಣಾ ವೆಚ್ಚದ ವಿವರಗಳನ್ನು ಪಡೆದು ಚುನಾವಣಾ ಆಯೋಗ ನೀಡಿರುವ ನಿರ್ದೇಶನಗಳಂತೆ ಅಭ್ಯರ್ಥಿಯ ಖಾತೆಗೆ ಜಮೆ ಮಾಡುವಂತೆ ತಿಳಿಸಿದರು. ಒಬ್ಬ ವ್ಯಕ್ತಿ ಅನೇಕ ಬ್ಯಾಂಕ್ ಖಾತೆಗೆ ಹಣ ತುಂಬುವುದು, ಅತಿ ಹೆಚ್ಚು ಬ್ಯಾಂಕ್ ವಹಿವಾಟು ನಡೆಸುವ ವ್ಯಕ್ತಿ ಮತ್ತು ಬ್ಯಾಂಕ್ನಲ್ಲಿ ಅನೇಕ ಬಾರಿ ಹಣ ಡ್ರಾ ಮಾಡುವವರ ಮೇಲೆ ನಿಗಾ ವಹಿಸಬೇಕು ಎಂದರು.
ಅಭ್ಯರ್ಥಿಯು ಏರ್ಪಡಿಸುವ ಸಭೆ ಮತ್ತು ಸಮಾರಂಭಗಳ ವೆಚ್ಚವನ್ನು ಪರಿಶೀಲಿಸಿ ಅಭ್ಯರ್ಥಿಯ ಖಾತೆಗೆ ಜಮೆ ಮಾಡುವ ಬಗ್ಗೆ ಪರಿಶೀಲಿಸಿ ಕ್ರಮವಹಿಸಬೇಕು, ಸಿ-ವಿಜಿಲ್ ಮೂಲಕ ದಾಖಲಾಗುವ ಪ್ರಕರಣಗಳ ಬಗ್ಗೆ ಕ್ರಮವಹಿಸಬೇಕು, ಜಿಲ್ಲೆಯಲ್ಲಿ ಭಾರತೀಯ ಮಧ್ಯ ಮತ್ತು ಬಿಯರ್ ವಶಪಡಿಸಿಕೊಂಡಿರುವ ಬಗ್ಗೆ ಖರ್ಚುಗಳನ್ನು ಸಂಬಂಧಿಸಿದವರಿಗೆ ಜಮೆ ಮಾಡುವ ಬಗ್ಗೆ ಕ್ರಮವಹಿಸಬೇಕು ಎಂದರು. ವೆಚ್ಚ ವೀಕ್ಷಕರುಗಳಾದ ಜೀತೇಂದ್ರ ಸಿಂಗ್, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕ ಅಧಿಕಾರಿ ರಾಧಾ ಹಾಗೂ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.