ಮೈಸೂರು: ಗೃಹಬಳಕೆಯ ಸಿಲಿಂಡರ್ ಗಳು ದುರ್ಬಳಕೆಯಾಗುತ್ತಿವೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ರೇಷನ್ ಹಂಚಿಕೆ ಮಾದರಿಯಲ್ಲಿ ಗ್ರಾಹಕರು ಹಾಗೂ ಸಿಲಿಂಡರ್ಗೆ ಬಾರ್ ಕೋಡ್ ಅಳವಡಿಸಿ, ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಸಿ ಎಸ್ ಚಂದ್ರಶೇಖರ್ ಒತ್ತಾಯಿಸಿದರು.
ಪತ್ರಿಕೆ ಹೇಳಿಕೆ ನೀಡಿದ ಅವರು ಕೋಟ್ಯಂತರ ರೂಪಾಯಿ ನಷ್ಟ ಮತ್ತು ಸ್ಫೋಟದ ಅಪಾಯವನ್ನುಂಟು ಮಾಡುವ ವಾಹನಗಳು ಮತ್ತು ವಾಣಿಜ್ಯ ಸ್ಥಳಗಳಲ್ಲಿ ಗೃಹ ಬಳಕೆಯ ಸಿಲಿಂಡರ್ಗಳ ವ್ಯಾಪಕ ಬಳಕೆಯನ್ನೂ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಗ್ರಾಹಕರು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಬುಕ್ ಮಾಡಿದ ನಂತರ ಒಟಿಪಿ
ಕಳುಹಿಸಬೇಕು. ಸಿಲಿಂಡರ್ ವಿತರಿಸುವಾಗ ಒಟಿಪಿ ನಮೂದಿಸಿದಾಗ ಬಿಲ್ ರಚಿಸುವ ವ್ಯವಸ್ಥೆ ರಚಿಸಬೇಕು. ಎಲ್ ಪಿಜಿ ಅಂದರೆ ಡೆಲಿವರಿ ಅಥೆಂಟಿಕೇಶನ್ ಕೋಡ್ ಅಥವಾ ಬಾರ್ಕೋಡ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ವಾಣಿಜ್ಯ ಸಿಲಿಂಡರ್ ಬೆಲೆಗಳು ಶೇ. 100 ರಷ್ಟು ಹೆಚ್ಚಾಗಿದೆ. ಇದರಿಂದಾಗಿ ವಾಣಿಜ್ಯ ಸಂಸ್ಥೆಗಳು ಗೃಹಬಳಕೆಯ ಸಿಲಿಂಡರ್ ಗಳನ್ನು ವ್ಯಾಪಕವಾಗಿ ಬಳಸುತ್ತಿವೆ. ಇದರಿಂದಾಗಿ ಸರಕಾರಕ್ಕೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ. ಸಂಘಟಿತ ದಂಧೆ ನಡೆಸುವವರಿಗೆ ಸರಕಾರಿ ತೈಲ ಕಂಪನಿಗಳು ಮತ್ತು ಎಲ್ ಪಿಜಿ ವಿತರಕರು ಬೆಂಬಲ ನೀಡಿದ್ದು, ಇದರ ವಿರುದ್ಧ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಗೃಹಬಳಕೆಯ ಸಿಲಿಂಡರ್ಗಳು ಆಟೋ ಮತ್ತಿತರೆ ವಾಹನಗಳಿಗೆ ದುರ್ಬಳಕೆಯಾಗುತ್ತಿವೆ. ಈ ಅಕ್ರಮಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.