ಬೆಂಗಳೂರು: ಸಾಹಿತ್ಯಕ್ಕೆ ಸಮಾಜವನ್ನು ಬೆಸೆಯುವ ಶಕ್ತಿ ಇದೆ. ಸಾಹಿತ್ಯದ ಮೂಲಕ ಸಮಾಜವನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರಿನ ಬ್ಯಾಂಕ್ವೆಂಟ್ ಹಾಲ್ನಲ್ಲಿ ಆಯೋಜಿಸಿದ್ದ ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರಿಗೆ ಸರಕಾರದ ವತಿಯಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾನು ಮುಷ್ತಾಕ್ ಅವರು ಕನ್ನಡಕ್ಕೆ ಬುಕರ್ ಪುರಸ್ಕಾರವನ್ನು ತಂದುಕೊಡುವ ಮೂಲಕ, ಇಡೀ ಕನ್ನಡ ಜಗತ್ತಿಗೆ ಗೌರವ ಹೆಚ್ಚಿಸಿರುವುದಾಗಿ ಸಿದ್ದರಾಮಯ್ಯ ಮೆಚ್ಚುಗೆ ಸೂಚಿಸಿದರು. “ಬಾನು ಅವರ ಸಾಧನೆ ಕನ್ನಡದ ಸಾಹಿತ್ಯದ ದಿಕ್ಕು-ದಿಶೆ ಬದಲಾಯಿಸುವ ಮಟ್ಟಿಗೆ ಪ್ರಭಾವ ಬೀರುವಂತಹದು,” ಎಂದ ಅವರು, ಬಾನು ಮತ್ತು ಅನುವಾದಕ ದೀಪಾ ಬಾಸ್ತಿ ಅವರಿಗೆ ತಲಾ ₹10 ಲಕ್ಷ ನಗದು ಪುರಸ್ಕಾರವನ್ನು ನೀಡಲಾಗುವುದು ಎಂದು ಘೋಷಿಸಿದರು.
ಬಾನು ಮುಷ್ತಾಕ್: ಸಾಹಿತ್ಯ, ಹಕ್ಕು ಹೋರಾಟ, ಮತ್ತು ಪ್ರಗತಿಪರ ಧ್ವನಿ
ಬಾನು ಮುಷ್ತಾಕ್ ತಮ್ಮ ಕತೆಗಳ ಮೂಲಕವೂ, ಪತ್ರಿಕೋದ್ಯಮ ಮತ್ತು ವಕಾಲತ್ತಿನ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಚಿಂತನೆಗಳನ್ನು ಸಾರಿದ್ದಾರೆ. ಲಂಕೇಶ್ ಪತ್ರಿಕೆಯಲ್ಲಿ ಪತ್ರಕರ್ತೆಯಾಗಿ ತಮ್ಮ ಕರಿಯರ್ ಆರಂಭಿಸಿದ್ದ ಬಾನು, ಬಡವರು ಮತ್ತು ಶೋಷಿತರ ಪರ ವಕಾಲತ್ತು ವಹಿಸಿ ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ಹಲವಾರು ಗೌರವಗಳನ್ನು ಪಡೆದಿರುವ ಬಾನು ಅವರ ಬರವಣಿಗೆಯಲ್ಲಿ ಸಾಮಾಜಿಕ ನ್ಯಾಯದ ಸ್ಪಷ್ಟ ಪ್ರತಿಬಿಂಬವಿದೆ ಎಂದು ಸಿಎಂ ಪ್ರಶಂಸಿಸಿದರು.
ಕನ್ನಡದ ದಿಗ್ಗಜರ ಪರಂಪರೆ ಮುಂದುವರಿಸುತ್ತಿದ್ದಾರೆ
ಸಿಎಂ ಸಿದ್ದರಾಮಯ್ಯ, ಬಾನು ಮುಷ್ತಾಕ್ ಅವರನ್ನು ಕನ್ನಡದ ತಾಳ್ಮೆಯ, ಸಹಾನುಭೂತಿಯ ಹಾಗೂ ಮಾನವೀಯತೆಯ ಪರಂಪರೆ ಮುಂದುವರಿಸುತ್ತಿರುವ ಲೇಖಕಿಯಾಗಿ ಕೊಂಡಾಡಿದರು. “ಪರಧರ್ಮ ಮತ್ತು ಪರಮತಗಳನ್ನು ಸಹಾನುಭೂತಿಯುಳ್ಳ ದೃಷ್ಟಿಕೋಣದಿಂದ ನೋಡಬೇಕು ಎಂಬ ಕವಿರಾಜಮಾರ್ಗದ ಸಂದೇಶ, ಮನುಷ್ಯ ಜಾತಿಯ ಏಕತೆಯನ್ನು ಸಾರಿದ ಪಂಪ, ಎಲ್ಲರನ್ನೂ ‘ಇವ ನಮ್ಮವ’ ಎನೆದು ಒಗ್ಗೂಡಿಸಿದ್ದ ಬಸವಣ್ಣ ಮತ್ತು ಹೆಣ್ಣು ಧ್ವನಿಯಾಗಿ ಅಕ್ಕಮಹಾದೇವಿಯ ಸರಣಿಯಲ್ಲಿ ಬಾನು ಮುಷ್ತಾಕ್ ಕಾರ್ಯನಿರ್ವಹಿಸಿದ್ದಾರೆ,” ಎಂದು ಅವರು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಗಣ್ಯರ ಸಾನ್ನಿಧ್ಯ
ಈ ಸರಕಾರಿ ಅಭಿನಂದನಾ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಅನೇಕ ಸಚಿವರು, ಶಾಸಕರು ಹಾಗೂ ಕನ್ನಡ ಸಾಹಿತ್ಯ ಲೋಕದ ದಿಗ್ಗಜರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬಾನು ಮುಷ್ತಾಕ್ ಅವರ ಬರವಣಿಗೆಗೆ ಸರಕಾರದ ಪರವಾಗಿ ಇಂಗ್ಲಿಷ್ ಅನುವಾದಕ್ಕೆ ಸಹಾಯ ಒದಗಿಸುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.