ಬೆಂಗಳೂರು: ಒಂಬತ್ತು ವರ್ಷಗಳ ಹಿಂದೆ ನಟ ಸುದೀಪ್ ಹೆಸರು ಬಳಸಿ ನಿರ್ದೇಶಕ ನಂದಕಿಶೋರ್ ತಮ್ಮಿಂದ ₹22 ಲಕ್ಷ ವಂಚನೆ ಮಾಡಿದ್ದಾರೆ ಎಂದು ಯುವನಟ ಶಬರೀಶ್ ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ.
“ನಂದಕಿಶೋರ್ ನನ್ನಿಂದ ಹಣ ಪಡೆದ ಬಳಿಕ ಸಿನಿಮಾಗಳಲ್ಲಿ ಅವಕಾಶ ನೀಡುತ್ತೇನೆ ಎಂದರು. ಆದರೆ ಆಫರ್ ಏನೂ ಸಿಗಲಿಲ್ಲ. ಸುದೀಪ್ ಸರ್ಗೆ ಈ ವಿಷಯ ತಿಳಿಸಲು ಯತ್ನಿಸಿದರೆ, ತಡೆಹಿಡಿಯಲಾಗುತ್ತಿತ್ತು,” ಎಂದು ಶಬರೀಶ್ ಹೇಳಿದ್ದಾರೆ. “ನಾನು ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ ಎರಡು ಸೀಸನ್ ಆಡಿದ್ದೇನೆ. ಹಣ ಕೇಳಿದರೆ, ‘ನಿನ್ನನ್ನು ಕೆಸಿಸಿಯಿಂದ ತಳ್ಳಿ ಹಾಕುತ್ತೇನೆ’ ಎಂದು ಬೆದರಿಸಿದರು,” ಎಂದು ದೂರಿದ್ದಾರೆ.
“ರಾಮಧೂತ ಚಿತ್ರದ ಶೂಟಿಂಗ್ ಮುಗಿದಿದೆ, ಆದರೆ ಬಿಡುಗಡೆಗೆ ಹಣವಿಲ್ಲ. ನನ್ನ ಹಣ ವಾಪಸ್ ನೀಡಿ ಎಂದರೆ, ‘ಏನ್ ಮಾಡ್ತೀಯೋ ಮಾಡು’ ಎನ್ನುತ್ತಿದ್ದಾರೆ,” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನಂದಕಿಶೋರ್ ಪ್ರತಿಕ್ರಿಯೆ ನೀಡಿದ್ದು, “ಶಬರೀಶ್ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನಾನು ಕಾನೂನು ರೀತಿಯಲ್ಲಿ ಉತ್ತರಿಸುತ್ತೇನೆ. ಅವರ ವಿರುದ್ಧ ದೂರು ನೀಡುತ್ತೇನೆ,” ಎಂದು ಹೇಳಿದ್ದಾರೆ.