ಬೆಂಗಳೂರು: ಕೃಷಿಯಿಂದಲೇ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ ಮತ್ತು ದೇಶದ ಆರ್ಥಿಕತೆಯ ಪ್ರಗತಿಯೂ ಆಗಲು ಕೃಷಿಯೇ ಮೂಲವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜಿಕೆವಿಕೆ ಸಭಾಂಗಣದಲ್ಲಿ ನಡೆದ “ಸೂಪರ್ ಸ್ಟಾರ್ ರೈತ” ಕಾರ್ಯಕ್ರಮದಲ್ಲಿ ಸಾಧಕ ರೈತರನ್ನು ಸನ್ಮಾನಿಸಿ ಅವರು ಮಾತನಾಡಿದರು.
“ಗ್ರಾಮೀಣ ಭಾರತದ ಶೇ.70 ಜನಸಂಖ್ಯೆ ಕೃಷಿ ಆಧಾರಿತವಾಗಿದ್ದು, ಆಹಾರ ಉತ್ಪಾದನೆಯಲ್ಲಿ ದೇಶ ಸ್ವಾವಲಂಭಿ ಆಗಲು ರೈತ ಸಮುದಾಯ ಪ್ರಮುಖ ಪಾತ್ರ ವಹಿಸಿದೆ,” ಎಂದರು. ರೈತರ ಅಭಿಪ್ರಾಯ ಆಧರಿಸಿ, ಕೃಷಿಯಲ್ಲಿ ಅನುಭವ ಆಧಾರಿತ ತಂತ್ರಜ್ಞಾನ ಅಳವಡಿಸುವ ಅಗತ್ಯವಿದೆ. Lab to Land ಮತ್ತು Land to Lab ಮಂತ್ರದೊಂದಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಸೂಚಿಸಿದರು.
ಸಾಮಾಜಿಕ ನ್ಯಾಯ ಮತ್ತು ವರ್ಗರಹಿತ ಸಮಾಜದ ನಿರ್ಮಾಣಕ್ಕೆ ರೈತರಿಗೆ ಆರ್ಥಿಕ ಶಕ್ತಿ ನೀಡಬೇಕು. ರೈತರ ಪಂಪ್ ಸೆಟ್ಗಳಿಗೆ ವರ್ಷಕ್ಕೆ ₹19,000 ಕೋಟಿ ಹಾಗೂ ಕೃಷಿ ನೀರಾವರಿಗೆ ₹26,000 ಕೋಟಿ ನೀಡಲಾಗಿದೆ. “ಇಷ್ಟು ಹಣ ವ್ಯಯ ಮಾಡಲು ಆರ್ಥಿಕತೆ ದಿವಾಳಿಯಾಗಿದ್ದರೆ ಸಾಧ್ಯವಾಗುತ್ತಿದೆಯೇ?” ಎಂದು ಪ್ರಶ್ನಿಸಿದರು.
ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಈಗಾಗಲೇ 24,000 ಕೃಷಿ ಹೊಂಡ ನಿರ್ಮಾಣವಾಗಿದೆ. ಸಾವಯವ ಇಂಗಾಲದ ಕೊರತೆಯಿಂದ ಭೂಮಿಯ ಫಲವತ್ತತೆ ಕುಸಿಯುತ್ತಿದೆ. ಹಾಗಾಗಿ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
“ನಾನೂ ರೈತ ಕುಟುಂಬದಿಂದ ಬಂದವನು. ರೈತರ ಕಷ್ಟ, ನಷ್ಟಗಳ ಅರಿವು ನನಗಿದೆ. ಅದರಿಂದ ಎಲ್ಲಾ ರೈತಪರ ಯೋಜನೆಗಳಿಗೆ ಸರ್ಕಾರವು ಮಂಜೂರಾತಿ ನೀಡುತ್ತಿದೆ,” ಎಂದು ತಿಳಿಸಿದರು. “ಸೂಪರ್ ಸ್ಟಾರ್ ರೈತ” ಪುರಸ್ಕೃತರು ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ಇತರ ರೈತರಿಗೆ ಪ್ರೇರಣೆಯಾಗಿದೆ ಎಂದರು.