ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತೀವ್ರವಾಗಿ ಹರಡಿದೆ ಎಂಬ ಆರೋಪಗಳನ್ನು ಬಿಜೆಪಿ ಎಂಎಲ್ಸಿ ರವಿಕುಮಾರ್ ಉಚ್ಚರಿಸಿದ್ದಾರೆ. ಬಿಜೆಪಿಯ ಕಚೇರಿಯಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ಒಬ್ಬೊಬ್ಬ ಶಾಸಕರು ತಮ್ಮದೇ ಸರಕಾರದ ವಿರುದ್ಧವೇ ಮಾತಾಡುತ್ತಿದ್ದಾರೆ. ರಾಜು ಕಾಗೆ, ಬಿ.ಆರ್. ಪಾಟೀಲ್, ಬೇಳೂರು ಗೋಪಾಲಕೃಷ್ಣ ನಿಖರವಾಗಿ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದಾರೆ. ಜಮೀರ್ ಅಹಮದ್ ಭ್ರಷ್ಟಾಚಾರ ಮಂತ್ರಿಯೆಂದು ತಮ್ಮ ಪಕ್ಷದವರೇ ಹೇಳುತ್ತಿದ್ದಾರೆ,” ಎಂದು ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಈ ಹೇಳಿಕೆಗಳಿಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು. “ಕೆಂಪಣ್ಣ ಪತ್ರ ಬರೆದಾಗ ರಾಜೀನಾಮೆ ಕೇಳಿದಿರಿ. ಇವತ್ತು ನಿಮ್ಮ ಶಾಸಕರೇ ಆರೋಪಿಸುತ್ತಿದ್ದಾರೆ. ನೈತಿಕತೆ ಇದ್ದರೆ ತಕ್ಷಣ ರಾಜೀನಾಮೆ ಕೊಡಿ,” ಎಂದರು.
ನಾವು ಅಧಿಕಾರದಲ್ಲಿ ಇದ್ದಿದ್ದರೇ ನಮ್ಮನ್ನ ನೀವು ಸುಮ್ಮನೆ ಬಿಡ್ತಿದ್ರಾ? ನೀವು ವಿಪಕ್ಷದಲ್ಲಿ ಇದ್ದಾಗ ಏನ್ ಮಾತಾಡಿದ್ರಿ ನೆನಪು ಮಾಡಿಕೊಳ್ಳಿ. ಶಾಸಕರ ಹೇಳಿಕೆಗಳಿಗೆ ಗೌರವ ಸಿಗಬೇಕಾದ್ರೆ ಕೂಡಲೇ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ಜಮೀರ್ ಅಹಮದ್ರಿಂದ ಕೂಡಲೇ ಸಿಎಂ ರಾಜೀನಾಮೆ ಪಡೆಯಬೇಕು. ಬಿ.ಆರ್ ಪಾಟೀಲ್, ರಾಜು ಕಾಗೆ ಸೇರಿ ಎಲ್ಲರ ಹೇಳಿಕೆ ಕುರಿತು ಹೋರಾಟ ಮಾಡ್ತೀವಿ. ಸದನದಲ್ಲಿ ಈ ಬಗ್ಗೆ ನಾವು ಚರ್ಚೆ ಮಾಡ್ತೀವಿ. ರಾಜೀನಾಮೆ ಕೊಡೋವರೆಗೂ ಬಿಡೋದಿಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ಮಾಡ್ತೀವಿ ಅಂತ ಎಚ್ಚರಿಸಿದರು.