ಮಂಗಳೂರು (ದಕ್ಷಿಣ ಕನ್ನಡ): ತಾನು ಮೊದಲು ಕೆಲಸ ಮಾಡುತ್ತಿದ್ದ ಬ್ಯಾಂಕ್ ನಲ್ಲೇ ನಿವೃತ್ತ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಕೆನರಾ ಬ್ಯಾಂಕ್ ನಲ್ಲಿಂದು ನಡೆದಿದೆ. ಮೃತರನ್ನು ಗಿರಿಧರ್ ಯಾದವ್ (61) ಎಂದು ಗುರುತಿಸಲಾಗಿದೆ.
ಕೊಡಿಯಾಲ್ ಬೈಲ್ ಕೆನರಾ ಬ್ಯಾಂಕ್ ನಲ್ಲಿ ಸುಮಾರು 40 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ ಗಿರಿಧರ್ ಯಾದವ್, ಇತ್ತೀಚೆಗೆ ನಿವೃತ್ತಿ ಹೊಂದಿದ್ದರು. ಆದರೂ ಬ್ಯಾಂಕ್ ನ ಮೇಲಿನ ಪ್ರೀತಿಯಿಂದ ಬ್ಯಾಂಕ್ ಗೆ ಹೋಗಿ ಬರುತ್ತಿದ್ದರು ಎಂದು ಹೇಳಲಾಗಿದೆ. ಅದೇ ರೀತಿ ನಿನ್ನೆ ಬ್ಯಾಂಕ್ ಗೆ ತೆರಳಿದವರು ಮತ್ತೆ ಮನೆಗೆ ವಾಪಸ್ ಆಗಿರಲಿಲ್ಲ. ಈ ಹಿನ್ನಲೆ ಗಿರಿಧರ್ ಅವರ ಪತ್ನಿ ಬಂದರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು ಎಂದು ಹೇಳಲಾಗಿದೆ.
ಇಂದು ಬೆಳಿಗ್ಗೆ ಬ್ಯಾಂಕ್ ಬಾಗಿಲು ತೆರೆದಾಗ ಬ್ಯಾಂಕ್ ನ ಸ್ಟೋರ್ ರೂಂ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗಿರಿಧರ್ ಅವರ ಮೃತದೇಹ ಪತ್ತೆಯಾಗಿದೆ.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಗಿರಿಧರ್ ಯಾದವ್ ಅವರು ರಾಜ್ಯಮಟ್ಟದ ಪವರ್ ಲಿಪ್ಟರ್ ಆಗಿದ್ದು, ಹಲವಾರು ಪದಕಗಳನ್ನು ಗಳಿಸಿದ್ದಾರೆ. ಅವರಿಗೆ ಆರೋಗ್ಯದ ಸಮಸ್ಯೆ ಇತ್ತು ಎಂದು ಹೇಳಲಾಗಿದೆ.