ಮಂಡ್ಯ: ಮಂಡ್ಯ ಜಿಲ್ಲೆಯ ಪ್ರಸಿದ್ಧ ಕೆಆರ್ಎಸ್ ಜಲಾಶಯ ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ಮಾತೆಗೆ ಬಾಗಿನ ಅರ್ಪಣೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಆರ್ಎಸ್ ಡ್ಯಾಂ ಮತ್ತು ಕನ್ನಂಬಾಡಿ ಕಟ್ಟೆ ಶೃಂಗಾರಗೊಂಡಿದ್ದು, ಹಸಿರು ತೋರಣ, ಹೂವಿನ ಅಲಂಕಾರ ಹಾಗೂ ಕನ್ನಡ ಬಾವುಟಗಳಿಂದ ಕಂಗೊಳಿಸುತ್ತಿದೆ.

ಜೂನ್ ತಿಂಗಳಲ್ಲಿ ಡ್ಯಾಂ ಸಂಪೂರ್ಣ ಭರ್ತಿಯಾದ ಪ್ರಕರಣ ಇತಿಹಾಸದಲ್ಲೇ ಇದೇ ಮೊತ್ತ ಮೊದಲ ಬಾರಿಗೆ ಸಂಭವಿಸಿದೆ. 124.80 ಅಡಿ ಗರಿಷ್ಠ ಮಟ್ಟದ ಜಲಾಶಯ ಇದೀಗ ಪೂರ್ಣವಾಗಿ ನೀರಿನಿಂದ ತುಂಬಿದ್ದು, 49.452 ಟಿಎಂಸಿ ಸಾಮರ್ಥ್ಯದಷ್ಟು ನೀರು ಸಂಗ್ರಹಗೊಂಡಿದೆ. 93 ವರ್ಷಗಳ ಇತಿಹಾಸದಲ್ಲೇ ಇದು ವಿಶೇಷ ದಾಖಲೆ.
ಇಂದು ಬೆಳಿಗ್ಗೆ 11.30ಕ್ಕೆ ಅಭಿಜಿತ್ ಮುಹೂರ್ತದಲ್ಲಿ ಸಿಎಂ ಸಿದ್ದರಾಮಯ್ಯ ಅವರು ವೈದಿಕ ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಬಾಗಿನ ಅರ್ಪಿಸಲಿದ್ದಾರೆ. ಇದು ಅವರಿಗೆ ನಾಲ್ಕನೇ ಬಾರಿಗೆ ಬಾಗಿನ ಅರ್ಪಿಸುವ ಅವಕಾಶ. ಈ ಮೂಲಕ ಜೂನ್ ತಿಂಗಳಲ್ಲಿ ಬಾಗಿನ ಅರ್ಪಿಸಿದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಸಿದ್ದರಾಮಯ್ಯ ಅವರಿಗೆ ಲಭಿಸಿದೆ.
ಈ ಮಹತ್ವದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದಾರೆ.