ಬೆಂಗಳೂರು: ಭಾರೀ ಅವ್ಯವಹಾರ ಮತ್ತು ದುರಾಡಳಿತದ ಹಿನ್ನೆಲೆಯಲ್ಲಿ, ಬೆಂಗಳೂರಿನ ಪ್ರಸಿದ್ಧ ಗಾಳಿ ಆಂಜನೇಯ ದೇವಸ್ಥಾನವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆಯುವ ಮಹತ್ವದ ಆದೇಶವನ್ನು ಕರ್ನಾಟಕ ಸರ್ಕಾರ ಹೊರಡಿಸಿದೆ. ಈ ಮೂಲಕ ದೇವಸ್ಥಾನದ ಆಡಳಿತ ಇನ್ಮುಂದೆ ಮುಜರಾಯಿ ಇಲಾಖೆ ನಿಯಂತ್ರಣಕ್ಕೆ ಒಳಪಡಲಿದೆ.
ದೇವಸ್ಥಾನದ ಆಡಳಿತ ಮಂಡಳಿಯಿಂದ ನಡೆದ ಅಕ್ರಮ ಚಟುವಟಿಕೆಗಳು ಮತ್ತು ಹಣಕಾಸು ಅವ್ಯವಹಾರ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ತನಿಖೆ ನಡೆಸಿದ ಮುಜರಾಯಿ ಇಲಾಖೆ ಆಯುಕ್ತರು, ಲಕ್ಷಾಂತರ ರೂ. ಆದಾಯ ಬಂದರೂ ಖಾತೆಗಳಲ್ಲಿ ಉಳಿದಿಲ್ಲ ಎಂಬ ಅಂಕಿ-ಅಂಶ ಪತ್ತೆಹಚ್ಚಿದ್ದಾರೆ. ದೇವಸ್ಥಾನ ಸಂಬಂಧ 25 ವರ್ಷಗಳಿಂದ ದಾಖಲೆಗಳಿಲ್ಲದೇ ಇರುವುದೂ ಗಮನ ಸೆಳೆದಿದೆ. ಈ ಎಲ್ಲಾ ಕಾರಣಗಳ ಬೆನ್ನಲ್ಲೇ ದೇವಸ್ಥಾನವನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳಲು ತೀರ್ಮಾನಿಸಿದೆ.