ಮಂಗಳೂರು (ದಕ್ಷಿಣ ಕನ್ನಡ) : ಮಂಗಳೂರಿನ ಮಣ್ಣಗುಡ್ಡದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾ ಬಾಲಕ ಮತ್ತು ಬಾಲಕಿಯರ ವಸತಿ ಗೃಹಕ್ಕೆ ಮಂಗಳೂರು ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ ಕುಮಾರ್ ಹಾಗೂ ಪೊಲೀಸ್ ನಿರೀಕ್ಷಕರಾದ ಭಾರತಿ ಜಿ, ರವಿ ಪವಾರ್ ರವರು ಸಿಬ್ಬಂದಿ ಜತೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪರಿಶೀಲನೆ ವೇಳೆ ಸಾಕಷ್ಟು ಲೋಪದೋಷಗಳು ಕಂಡುಬಂದಿದೆ.
ಮುಖ್ಯವಾಗಿ ವಸತಿ ಗೃಹದ ಅಡುಗೆ ಕೋಣೆಯಲ್ಲಿ ಶುಚಿತ್ವ ಇರಲಿಲ್ಲ. ಧವಸ ಧಾನ್ಯಗಳ ಸ್ಟಾಕ್ ಇರಲಿಲ್ಲ. ಅಕ್ಕಿಯಲ್ಲಿ ಹುಳುಗಳು ಇರುವುದು ಕಂಡುಬಂದಿದೆ. ಸ್ಟಾಕ್ ರಿಜಿಸ್ಟರ್ ಇರಲಿಲ್ಲ. ಅಡುಗೆಗೆ ಕಡಿಮೆ ಗುಣಮಟ್ಟದ ಹೆಚ್ಚು ಪ್ಯಾಟ್ ಇರುವ ಪಾಮೋಲಿನ್ ಅಡುಗೆ ಎಣ್ಣೆಯನ್ನು ಬಳಸುವುದು ಕಂಡುಬಂದಿದೆ. ವಸತಿ ಗೃಹದಲ್ಲಿ 33 ಮಕ್ಕಳಿದ್ದರೂ ಅವರಿಗೆ ಪೌಷ್ಟಿಕ ಯುಕ್ತ ಆಹಾರ ನೀಡಿರುವುದಿಲ್ಲ. ಊಟದ ಹಾಲ್ ನಲ್ಲಿ ಹೆಚ್ಚಿನ ಸ್ಥಳವಕಾಶ ಇಲ್ಲದಿದ್ದರೂ ಕೂಡ ಎರಡು ವಸತಿ ಗ್ರಹದಲ್ಲಿನ ಬಾಲಕರಿಗೆ ಮತ್ತು ಬಾಲಕಿಯರಿಗೆ ಒಂದೇ ಕಡೆಯಲ್ಲಿ ಊಟದ ವ್ಯವಸ್ಥೆ ಕಲ್ಪಿಸುವುದು ಕಂಡುಬಂದಿದೆ.

ಸ್ಕಾಲರ್ಶಿಪ್ ಪಡೆದು ವಿದ್ಯಾಭ್ಯಾಸ ಮಾಡುವ ಹೆಚ್ಚಿನ ಮಕ್ಕಳು ಅಥ್ಲೆಟಿಕ್ಸ್ ರವಾಗಿದ್ದು, ಸರ್ಕಾರದಿಂದ ಅನುದಾನ ಬರುತಿದ್ದರು ಕೂಡ ಸರಿಯಾದ ಆಹಾರದ ವ್ಯವಸ್ಥೆ ಮಾಡಿರುವುದಿಲ್ಲ.
ಸರ್ಕಾರದಿಂದ ಪ್ರತಿ ವರ್ಷ ಸ್ಪೋರ್ಟ್ಸ್ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲು ಅನುದಾನ ನೀಡುತ್ತಿದ್ದರು ಕೂಡ ಅರ್ಧ ವರ್ಷ ಮಕ್ಕಳ ಪೋಷಕರೇ ತಮ್ಮ ಖರ್ಚಿನಲ್ಲಿ ಕ್ರೀಡಾ ಸಾಮಗ್ರಿಗಳನ್ನು ಮಕ್ಕಳಿಗೆ ಖರೀದಿಸಿ ಕೊಡಬೇಕಾಗುತ್ತದೆ.
ಸರಕಾರದಿಂದ ಅನುದಾನ ಬರುತ್ತಿದ್ದರು ಕೂಡ ವಿತರಿಸಿರುವ ಶೂ, ಕಂಪನಿಯ ಶೂ ಆಗಿದ್ದರು ಕೂಡ ಕಳಪೆ ಗುಣಮಟ್ಟದಾಗಿದ್ದು ಕೆಲವೇ ವಾರದಲ್ಲಿ ಹಾಳಾಗಿರುತ್ತದೆ ಎಂಬುದಾಗಿ ತಿಳಿದುಬಂದಿದೆ. ಕ್ರೀಡಾ ವಸತಿ ನಿಲಯದಲ್ಲಿ ಹೆಚ್ಚಿನ ಕೊಠಡಿಗಳು ಇದ್ದರೂ ಕೂಡ ಒಂದು ಕೊಠಡಿಯಲ್ಲಿ ಐದು ಮಕ್ಕಳಿಗೆ ವಸತಿ ವ್ಯವಸ್ಥೆ ಕಲ್ಪಿಸಿರುವುದು ಕಂಡು ಬರುತ್ತದೆ. ಮಕ್ಕಳನ್ನು ವಿವಿಧ ಕ್ರೀಡೆಗಳಿಗೆ ಕರೆದುಕೊಂಡು ಹೋಗಲು ಸರಕಾರದಿಂದ ಅನುದಾನ ಬರುತ್ತಿದ್ದರೂ ಕೂಡ ಮಕ್ಕಳ ಪೋಷಕರೇ ಖರ್ಚನ್ನು ಭರಿಸಬೇಕಾಗುತ್ತದೆ ಸರಕಾರದಿಂದ ಬರುವ ಅನುದಾನ ದುರುಪಯೋಗವಾಗುವುದು ಕಂಡುಬಂದಿದೆ.
ಕ್ರೀಡಾ ವಸತಿ ಗ್ರಹದ ಮಕ್ಕಳು ತಮ್ಮ ಪೋಷಕರನ್ನು ಸಂಪರ್ಕಿಸಲು ದೂರವಾಣಿಯ ವ್ಯವಸ್ಥೆ ಇರುವುದಿಲ್ಲ. ಕ್ರೀಡಾ ವಿದ್ಯಾರ್ಥಿಗಳು ಕ್ರೀಡೆಯ ಸಂದರ್ಭದಲ್ಲಿ ಬೇರೆ ಬೇರೆ ಕಡೆಗೆ ತೆರಳಿದಾಗ ತರಗತಿಯ ಪಾಠ ಪ್ರವಚನಕ್ಕೆ ತೊಂದರೆಯಾಗುತ್ತಿದ್ದು ಕಂಪ್ಯೂಟರ್ ಮೂಲಕ ಅಧ್ಯಯನಕ್ಕೆ ಸಂಬಂಧಿಸಿದ ವಿಷಯವನ್ನು ಪಡೆದುಕೊಳ್ಳಲು ಕಂಪ್ಯೂಟರನ್ನು ಒದಗಿಸಿರುವುದಿಲ್ಲ ಎಂಬುದಾಗಿ ತಿಳಿದು ಬಂದಿರುತ್ತದೆ. ಕಂಪ್ಯೂಟರ್ ಗಳು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಒದಗಿಸದೆ ಹಾಳಾಗಿರೋದು ಕಂಡು ಬಂದಿದೆ. ಮಕ್ಕಳಿಗೆ ಕೌನ್ಸಿಲಿಂಗ್ ಮತ್ತು ಹೆಲ್ತ್ ಚೆಕ್ ಅಪ್ ಮಾಡಿರುವುದು. ದಾಖಲಾತಿಯಿಂದ ಕಂಡುಬಂದಿರುವುದಿಲ್ಲ.

ಈ ಬಗ್ಗೆ ಮಂಗಳ ಸ್ಟೇಡಿಯಂ ನಲ್ಲಿ ಇರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಉಪ ನಿರ್ದೇಶಕರ ಕಚೇರಿಯ ಸಮೀಪ ಅಂದರೆ 100 ಮೀಟರ್ ದೂರದಲ್ಲಿ ಬಾಲಕ ಬಾಲಕಿಯರ ಕ್ರೀಡಾ ವಸತಿ ಗ್ರಹ ಇದ್ದರೂ ಕೂಡ ಕ್ರೀಡಾ ವಸತಿ ನಿಲಯಕ್ಕೆ ಇಲಾಖೆಯ ಸಹಾಯಕ ನಿರ್ದೇಶಕರು, ಉಪ ನಿರ್ದೇಶಕರು ಭೇಟಿಕೊಟ್ಟು ಪರಿಶೀಲನೆ ಮಾಡಿರುವುದು ಕಂಡುಬಂದಿರುವುದಿಲ್ಲ. ಈ ಅಧಿಕಾರಿಗಳು ವಸತಿ ಗ್ರಹದಲ್ಲಿ ಆಹಾರದ ಕೊರತೆ, ಆಹಾರದ ಸರಬರಾಜಿನಲ್ಲಿ ಅವ್ಯವಹಾರ, ಟೆಂಡರ್ ಬದಲಾವಣೆ ಮಾಡದಿರುವುದು ,ಸ್ಟಾಕ್ ಪರಿಶೀಲಿಸದಿರುವುದು ಕಂಡುಬಂದಿರುತ್ತದೆ.
ಈ ಬಗ್ಗೆ ಸಮಗ್ರ ವರದಿಯನ್ನು ಗೌರವಾನ್ವಿತ ಲೋಕಾಯುಕ್ತ ರವರಿಗೆ ವರದಿ ನಿವೇದಿಸಲಾಗುವುದು ಎಂಬುದಾಗಿ ಪೊಲೀಸ್ ಅಧೀಕ್ಷಕರು(ಪ್ರಭಾರ) ಕುಮಾರಚಂದ್ರ ಅವರು ತಿಳಿಸಿದ್ದಾರೆ.