- ವರದಿ.ಎಸ್ ರವಿ ಹೊನ್ನೇನಹಳ್ಳಿ
ಕೆ.ಆರ್.ಪೇಟೆ, ಯುವಕರ ಗುಂಪೊoದು ವಿನಾಕಾರಣ ಹೆಣ್ಣು ಮಕ್ಕಳು ಇರುವ ಕೆ.ಎಸ್.ಆರ್.ಟಿ.ಸಿ ಬಸ್ ಅನ್ನು ಅಡ್ಡಗಟ್ಟಿ ಹೆಣ್ಣು ಮಕ್ಕಳನ್ನು ಕೆಣಕಲು ಪ್ರಯತ್ನಿಸಿ, ಅದು ಸಾಧ್ಯವಾಗದೇ ಇದ್ದಾಗ ಬಸ್ ಕಂಡಕ್ಟರ್ ಮೇಲೆ ಕಲ್ಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ವಿಠಲಾಪುರ ಮಾರ್ಗದ ಪಿಡಿಜಿ ಕೊಪ್ಪಲು ಗೇಟ್ ಬಳಿ ನಡೆದಿದೆ.
ಕೆ.ಆರ್.ಪೇಟೆ ಸಾರಿಗೆ ಡಿಪೋ ಕಂಡಕ್ಟರ್ ಟಿ.ಜಗದೀಶ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಸಾರಿಗೆ ನೌಕರ ಎಂದು ತಿಳಿದು ಬಂದಿದೆ. ಬೈಕ್ನಲ್ಲಿ ಬಂದಿರುವ ನಾರ್ಗೋನಹಳ್ಳಿ ಗ್ರಾಮದ ಯುವಕರು ಎನ್ನಲಾದ ಧರ್ಮ, ಭರತ್, ತಿಮ್ಮ, ಶೇಖರ್ ಎಂಬುವವರು ಬಸ್ ಅನ್ನು ಅಡ್ಡಗಟ್ಟಿ ಬಸ್ಸಿನ ಒಳಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಹೆಣ್ಣು ಮಕ್ಕಳಿದ್ದ ಕಾರಣ ಯುವಕರ ಗುಂಪು ಬಸ್ಸಿನೊಳಗೆ ನುಗ್ಗದಂತೆ ತಡೆದು ಹೆಣ್ಣು ಮಕ್ಕಳ ಸುರಕ್ಷತೆಗೆ ಕಂಡಕ್ಟರ್ ಜಗದೀಶ್ ಮತ್ತು ಡ್ರೆöÊವರ್ ಈರಗಂಟಪ್ಪ ಮುಂದಾಗಿದ್ದಾರೆ. ಬಸ್ಸಿನೊಳಗೆ ಹೋಗಲು ತಡೆದ ಹಿನ್ನೆಲೆಯಲ್ಲಿ ಕಲ್ಲಿನಿಂದ ಕಂಡಕ್ಟರ್ ಮತ್ತು ಡ್ರೈವರ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಕಂಡಕ್ಟರ್ ಜಗದೀಶ್ ಅವರಿಗೆ ತಲೆ ಮತ್ತು ಕಣ್ಣಿನ ಭಾಗಕ್ಕೆ ಗಂಭೀರವಾದ ಗಾಯಳಾಗಿವೆ. ಡ್ರೈವರ್ ಈರಗಂಟಪ್ಪ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಕೂಡಲೇ ಬಸ್ಸಿನ ನಿರ್ವಾಹಕ ಜಗದೀಶ್ ಅವರನ್ನು
ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ: ಕೊಡಿಸಲಾಯಿತು. ನಂತರ ವೈದ್ಯರ ಸಲಹೆಯ ಮೇರೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಕೆ.ಆರ್.ಪೇಟೆ ಪಟ್ಟಣದ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಸಾರಿಗೆ ನೌಕರರ ಪ್ರತಿಭಟನೆ: ಪಿಡಿಜಿ ಕೊಪ್ಪಲು ಗೇಟ್ ಬಳಿ ಯುವಕರ ಗುಂಪು ಬಸ್ ಅನ್ನು ಅಡ್ಡಗಟ್ಟಿ ತಮ್ಮ ಸಾರಿಗೆ ಇಲಾಖೆಯ ನೌಕರರ ಮೇಲೆ ಹಲ್ಲೆ ನಡೆಸಿರುವ ಘಟನೆಯನ್ನು ಖಂಡಿಸಿ ತಾಲ್ಲೂಕು ಕೆ.ಎಸ್.ಆರ್.ಟಿ.ಸಿ ನೌಕರರ ಯೂನಿಯನ್ ವತಿಯಿಂದ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿ ಕೂಡಲೇ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ನಮಗೆ ಬಸ್ಸಿನಲ್ಲಿರುವ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಎಲ್ಲರ ರಕ್ಷಣೆ
ಮುಖ್ಯವಾಗಿರುತ್ತದೆ. ಇದರಿಂದ ನಾವು ಪ್ರಯಾಣಿಕರ ರಕ್ಷಣೆಯ ಜೊತೆಗೆ ನಮ್ಮ ರಕ್ಷಣೆ ಮಾಡಿಕೊಳ್ಳಲು ಕಷ್ಟವಾಗುತ್ತಿದೆ. ಹಾಗಾಗಿ ಸಾರಿಗೆ ಬಸ್ಸಿನ ಚಾಲಕ-ನಿರ್ವಾಹಕರಿಗೆ ಸೂಕ್ತ ರಕ್ಷಣೆ ನೀಡಬೇಕು. ರೈಲಿನಲ್ಲಿ ಇರವ ಮಾದರಿಯಲ್ಲಿ ಸಾರಿಗೆ ಪೊಲೀಸರನ್ನು ಸರ್ಕಾರವು ನಿಯೋಜನೆ ಮಾಡಬೇಕು, ಈ ಮೂಲಕ ಸಾರಿಗೆ ನೌಕರರಿಗೆ ಹಾಗೂ ಬಸ್ಸಿನ ಪ್ರಯಾಣಿಕರಿಗೆ ಸೂಕ್ತ ರಕ್ಷಣೆ ಒದಗಿಸಿಕೊಡಬೇಕು ಎಂದು ಪ್ರತಿಭಟನಾನಿರತ ಸಾರಿಗೆ ನೌಕರರು ಒತ್ತಾಯ ಮಾಡಿದರು.