ಗುಂಡ್ಲುಪೇಟೆ : ತಾಲೂಕಿನ ಯಡವನಹಳ್ಳಿ ಬಳಿ ಚಿರತೆಯೊಂದು ಮೇಕೆಯನ್ನು ಹೊತ್ತೊಯ್ದಿದೆ. ಈ ಸಂದರ್ಭದಲ್ಲಿ ರೈತರು ಓಂಕಾರ್ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದ್ದು, ಈ ಸಂದರ್ಭ ಆನೆ ಕಾವಲು ಪಡೆಯ ಸಿಬ್ಬಂದಿಗಳು ತೆರಳಿದ್ದರು. ಮೇಕೆ ಹೊತ್ತೊಯ್ದ ಸ್ಥಳದಲ್ಲಿ ಕೂಂಬಿಂಗ್ ನಡೆಸುವಾಗ ಚಿರತೆ ಅರಣ್ಯ ಇಲಾಖೆಯ ಆನೆ ಕಾವಲುಪಡೆ ಸಿಬ್ಬಂದಿ ಬಂಗಾರ್ ಎಂಬವರ ಮೇಲೆ ದಾಳಿ ನಡೆಸಿದ್ದು ಕತ್ತು, ತಲೆ, ಕೈ ಗಳನ್ನು ಗಾಯಗೊಳಿಸಿದೆ. ಈ ಸಂದರ್ಭದಲ್ಲಿ ಕೂಗಾಡಿ ಪಟಾಕಿ ಹೊಡೆದು ಕೂಗಿಕೊಂಡಾಗ ಚಿರತೆ ಓಡಿ ಹೊಗಿದೆ. ಘಟನೆಯ ನಂತರ ಸುತ್ತಮುತ್ತಲಿನ ಗ್ರಾಮಸ್ಥರು ಗಾಬರಿಯಾಗಿದ್ದು ಹೊರಗೆ ಓಡಾಡಲು ಭಯಭೀತರಾಗಿದ್ದಾರೆ.
ಶುಕ್ರವಾರ ಸಂಜೆ ಕುರುಬರಹುಂಡಿ ಬಳಿ ಗ್ರಾಮದ ಮಹೇಶ್ ಅಲಿಯಾಸ್ ಗುಂಡು ಎಂಬವರು ತೋಟದ ಮನೆಯಿಂದ ಹಾಲು ಕರೆದುಕೊಂಡು ಗ್ರಾಮದ ಕಡೆ ಬರುವಾಗ ಹುಲಿ ರಸ್ತೆಯಲ್ಲಿ ನಿಂತಿತ್ತು. ಇದನ್ನು ನೋಡಿದ ಮಹೇಶ್ ಮತ್ತೆ ತೋಟದ ಮನೆ ಕಡೆ ಓಡಿ ಹೋಗಿದ್ದಾರೆ. ಈ ಭಾಗದಲ್ಲಿ ಹುಲಿ,ಚಿರತೆ ಸಂಖ್ಯೆ ಹೆಚ್ಚಿದ್ದು ಅರಣ್ಯ ಇಲಾಖೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.
ಚಿರತೆ ದಾಳಿಗೆ ಒಳಗಾದ ಆನೆ ಕಾವಲುಪಡೆಯ ಸಿಬ್ಬಂದಿ ಬಂಗಾರ್ ಗೆ ಗಂಭೀರ ಗಾಯಗಳಾಗಿದ್ದು ಪ್ರಥಮ ಚಿಕಿತ್ಸೆ ಯನ್ನು ಬೇಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.



