ವರದಿ :ಸ್ಟೀಫನ್ ಜೇಮ್ಸ್.
ಬೆಳಗಾವಿ: ‘ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ವರ್ಷದ ಕೊನೆಯ (4ನೇ) ಲೋಕ ಅದಾಲತ್ ಡಿ. 13ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ನಡೆಯಲಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ ನಾಯಕ ತಿಳಿಸಿದರು.
ನ್ಯಾಯಾಧೀಶರ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಈ ವರ್ಷದ ಕೊನೆಯ ಲೋಕ ಅದಾಲತ್ ಇದಾಗಿದ್ದು, ಇದಕ್ಕೂ ಮುನ್ನ 3 ಲೋಕ್ ಅದಾಲತ್ಗಳು ನಡೆದಿವೆ. ನ್ಯಾಯಾಲಯದಲ್ಲಿ ಬಾಕಿ ಇರುವ ವಿವಿಧ ಪ್ರಕರಣಗಳನ್ನು ಕೊನೆಯ ಅದಾಲತ್ನಲ್ಲಿ ರಾಜಿ ಮಾಡಲಾಗುವುದು’ ಎಂದರು
‘ವೈವಾಹಿಕ, ಕೌಟುಂಬಿಕ ಮತ್ತು ಪಾಲು, ಬ್ಯಾಂಕುಗಳಿಗೆ ಸಂಬಂಧಪಟ್ಟ ಪ್ರಕರಣಗಳು, ಚೆಕ್ ಬೌನ್ಸ್, ಭಾರತ ದಂಡ ಸಂಹಿತೆಯ ರಾಜಿಯಾಗಬಲ್ಲ ಪ್ರಕರಣಗಳು, ವ್ಯಾಜ್ಯಗಳು, ಮೋಟಾರ್ ವಾಹನ ಅಪಘಾತ ಪರಿಹಾರ, ಕಂದಾಯ ಮತ್ತು ಇತರ ಎಲ್ಲ ರೀತಿಯ ರಾಜಿಯಾಗಬಹುದಾದ ಪ್ರಕರಣಗಳ ಹಾಗೂ ನ್ಯಾಯಾಲಯಗಳಲ್ಲಿ ತನಿಖೆಗೆ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುವುದು. ಲೋಕ ಅದಾಲತ್ನಲ್ಲಿ ಪರಿಹರಿಸಬಹುದಾದ ಪ್ರಕರಣಗಳನ್ನು ಗುರುತಿಸಿ ಇತ್ಯರ್ಥಪಡಿಸಿ ನ್ಯಾಯಾಲಯದ ಸಮಯ ಉಳಿತಾಯ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ’ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂದೀಪ ಪಾಟೀಲ ಮಾತನಾಡಿ, ‘ಕಳೆದ ಲೋಕ ಅದಾಲತ್ನಲ್ಲಿ 14,500 ಪ್ರಕರಣಗಳನ್ನು ಜಿಲ್ಲೆಯ ನ್ಯಾಯಾಲಯಗಳಲ್ಲಿ ಇತ್ಯರ್ಥ ಪಡಿಸಲಾಗಿದೆ. ಅದೇ ರೀತಿಯಲ್ಲಿ ಈಗ ನಡೆಯಲಿರುವ ಲೋಕ ಅದಾಲತ್ನಲ್ಲಿ ಸುಮಾರು 20 ಸಾವಿರ ಪ್ರಕರಣಗಳನ್ನು ಗುರುತಿಸಲಾಗಿದ್ದು, ಕನಿಷ್ಠ 14 ರಿಂದ 16 ಸಾವಿರದ ವರೆಗೂ ಪ್ರಕರಣಗಳ ಇತ್ಯರ್ಥ ಪಡಿಸುವ ಎಂದು ಗುರಿ ನಿಗದಿಪಡಿಸಲಾಗಿದೆ’ ಎಂದರು.
‘ವಾಹನ ದಂಡ ಶೇ 50ರಷ್ಟು ರಿಯಾಯಿತಿ’
‘ವಾಹನ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ದಂಡವನ್ನು ಶೇ 50ರಷ್ಟು ರಿಯಾಯತಿ ನೀಡಿ ದಂಡ ಪಾವತಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ನ್ಯಾಯಾಧೀಶರಾದ ಮಂಜುನಾಥ ನಾಯಕ ಹೇಳಿದರು. ‘ಜಿಲ್ಲೆಯ ಎಲ್ಲಾ 14 ತಾಲ್ಲೂಕು ಕೇಂದ್ರಗಳ ನ್ಯಾಯಾಲಯ ಸಮುಚ್ಚಯದಲ್ಲಿ ಲೋಕ ಅದಾಲತ್ ಏಕ ಕಾಲದಲ್ಲಿ ನಡೆಯಲಿದೆ. ನ್ಯಾಯಾಲಯ ಸಮಯ ಉಳಿತಾಯದ ಜತೆಗೆ ಜನರಿಗೂ ಅನುಕೂಲಕರ’ ಎಂದರು.



