ಗುಡಿಬಂಡೆ : ಇಂದಿನ ಯುವಜನತೆ ಕ್ರೀಡೆಗಳತ್ತ ಹೆಚ್ಚು ಆಸಕ್ತಿ ತೋರುತ್ತಿಲ್ಲದಿರುವುದು ಶೋಚನೀಯ. ಕ್ರೀಡೆಗಳಿಂದ ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಶಕ್ತಿ ಸಹ ಸಿಗಲಿದೆ ಆದ್ದರಿಂದ ಯುವಜನತೆ ಹೆಚ್ಚಾಗಿ ಕ್ರೀಡಾ ಕೂಟಗಳಲ್ಲಿ ಭಾಗವಹಿಸಬೇಕೆಂದು ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ತಿಳಿಸಿದರು.
ತಾಲೂಕಿನ ಬೀಚಗಾನಹಳ್ಳಿ ಗ್ರಾಮದ ಭಗತ್ ಸಿಂಗ್ ಯುವಕರ ಸಂಘದ ವತಿಯಿಂದ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿಗೆ ಯುವಜನತೆ ಕ್ರೀಡೆಗಳತ್ತ ಹೆಚ್ಚು ಒಲವು ತೋರುತ್ತಿಲ್ಲ. ಮೊಬೈಲ್, ಇಂಟರ್ ನೆಟ್ ಗಳಿಗೆ ದಾಸರಾಗಿ ಕ್ರೀಡೆಗಳನ್ನು ಮರೆಯುತ್ತಿದ್ದಾರೆ. ಯುವಕರು ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಕ್ರೀಡಾಮನೋಭಾವ ಬೆಳೆಸಿಕೊಳ್ಳಬೇಕು. ಭಾಗವಹಿಸುವ ಮೂಲಕ ಉತ್ತಮ ಆರೋಗ್ಯ ಲಭಿಸುತ್ತದೆ ಜೊತೆಗೆ ಗ್ರಾಮಗಳಲ್ಲಿ ಒಗ್ಗಟ್ಟು ಸಹ ಬೆಳೆಯುತ್ತದೆ ಎಂದರು.
ಬಳಿಕ ಸಿಎಂ ಪವರ್ ಶೇರಿಂಗ್ ಕುರಿತು ಮಾತನಾಡಿದ ಶಾಸಕರು, ಪವರ್ ಶೇರಿಂಗ್ ಕುರಿತ ಎಲ್ಲವೂ ಇದೀಗ ಸರಿ ಹೋಗಿದೆ. ಸಿಎಂ ಹಾಗೂ ಡಿಸಿಎಂ ಇಬ್ಬರೂ ಒಂದಾಗಿ ಈ ಬಗ್ಗೆ ಹೇಳಿಕೆ ನೀಡಿದ್ದು, ರಾಜ್ಯ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಗೊಂದಲ ಸೃಷ್ಟಿ ಕೇವಲ ಮಾಧ್ಯಮಗಳದ್ದು ಅಷ್ಟೆ ಎಂದಿದ್ದಾರೆ.
ನಂತರ ಬೀಚಗಾನಹಳ್ಳಿ ಗ್ರಾಮದ ಮುಖಂಡ ನರೇಂದ್ರ ಮಾತನಾಡಿ, ನಮ್ಮ ಗ್ರಾಮದಲ್ಲಿ ಭಗತ್ ಸಿಂಗ್ ಯುವಕರ ಸಂಘದ ವತಿಯಿಂದ ವಾಲಿಬಾಲ್ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಕಡೆಯಿಂದ ತಂಡಗಳು ಆಗಮಿಸಿದೆ. ಎಲ್ಲಾ ತಂಡಗಳು ಶಿಸ್ತು ಸಂಯಮದಿಂದ ನಡೆದುಕೊಳ್ಳಬೇಕು. ಯಾವುದೇ ಒಂದು ಕ್ರೀಡೆಯಲ್ಲಿ ಒಂದು ತಂಡ ಗೆದ್ದರೇ, ಮತ್ತೊಂದು ತಂಡ ಸೋಲಬೇಕು ಇದು ಸಾಮಾನ್ಯ ಪ್ರಕ್ರಿಯೆ. ಆದ್ದರಿಂದ ಎಲ್ಲರೂ ಸೋಲು-ಗೆಲುವು ಎರಡನ್ನೂ ಸಮನಾಗಿ ತೆಗೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಕ್ರೀಡಾಕೂಟಗಳನ್ನು ಮತ್ತಷ್ಟು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಈ ವೇಳೆ, ಬಿಇಒ ಕೃಷ್ಣಕುಮಾರಿ, ಮುಖಂಡರಾದ ಮಹದೇವಪ್ಪ, ತಿರುಮಣಿ ಮಂಜುನಾಥ್, ವೆಂಕಟನರಸಪ್ಪ, ಭಗತ್ ಸಿಂಗ್ ಯುವಕರ ಸಂಘದ ಕಿರಣ್ ಸೇರಿದಂತೆ ಹಲವರು ಭಾಗವಹಿಸಿದ್ದರು.



