ಇಂದೋರ್ : ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಹಿಂದುತ್ವವನ್ನು “ಭಾರತದ ಆತ್ಮ” ಎಂದು ಬಣ್ಣಿಸಿದ್ದು, ಧಾರ್ಮಿಕ ಮತಾಂತರಗಳನ್ನು ಸಾರ್ವಜನಿಕ ಜಾಗೃತಿ, ಸಾಮಾಜಿಕ ಸಾಮರಸ್ಯ ಮತ್ತು ಕಟ್ಟುನಿಟ್ಟಾದ ಕಾನೂನುಗಳ ಜಾರಿಯಿಂದ ತಡೆಯಬಹುದು ಎಂದು ಹೇಳಿದ್ದಾರೆ.
ಆರ್ಎಸ್ಎಸ್ನ ಶತಮಾನೋತ್ಸವದ ಅಂಗವಾಗಿ ಇಂದೋರ್ನಲ್ಲಿ ಆಯೋಜಿಸಿದ ಪ್ರಮುಖ ಜನ ಗೋಷ್ಠಿಯಲ್ಲಿ ಈ ಕುರಿತು ಮಾತನ್ನಾಡಿದ್ದಾರೆ. ದತ್ತಾತ್ರೆಯ ಹೊಸಬಾಳೆ ಅವರು ಹಿಂದುತ್ವ ಭಾರತದ ಆತ್ಮ ಎಂದು ಮಾತನಾಡುತ್ತಾ, “ಹಿಂದುತ್ವ ಭಾರತದ ಆತ್ಮ. ಈ ಮಾರ್ಗದ ಮೂಲಕ ದೇವರನ್ನು ತಲುಪಬಹುದು ಅಥವಾ ಆ ಮಾರ್ಗದ ಮೂಲಕ ತಲುಪಬಹುದು ಎಂಬುದು ಹಿಂದೂ ಚಿಂತನೆ. ಹೀಗೆ ಹೇಳುವ ಸಮಾಜವೇ ಹಿಂದೂ. ಭೂಮಿಯಲ್ಲಿ ವಾಸಿಸುವ ಈ ಸಮಾಜದಿಂದಾಗಿ, ಇದು ಹಿಂದೂ ರಾಷ್ಟ್ರವಾಗಿದೆ. ಹಿಂದೂ ಸಂಸ್ಕೃತಿಯು ವೈವಿಧ್ಯಮಯ ಅಭಿವ್ಯಕ್ತಿಗಳನ್ನು ಹೊಂದಿದೆ, ಆದರೆ ಅದರ ಮೂಲ ಒಂದೇ ಆಗಿದೆ” ಎಂದು ವಿವರಿಸಿದರು.
ಧಾರ್ಮಿಕ ಮತಾಂತರಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಧರ್ಮ ಜಾಗೃತಿ, ಸೇವಾ ಕಾರ್ಯಗಳು, ಸಾಮಾಜಿಕ ಸಾಮರಸ್ಯ, ಸಂತರು ಭೇಟಿ ನೀಡುವುದು ಮತ್ತು ಕಟ್ಟುನಿಟ್ಟಾದ ಕಾನೂನುಗಳ ಜಾರಿ ಮತಾಂತರಗಳನ್ನು ತಡೆಯಬಹುದು ಎಂದು ತಿಳಿಸಿದರು.
ಭಾರತೀಯ ಸಂಸ್ಕೃತಿಯಲ್ಲಿ ‘ಧರ್ಮ’ ಎಂಬ ಪರಿಕಲ್ಪನೆಯು ಇಂಗ್ಲಿಷ್ ಪದ ‘ರಿಲಿಜಿಯನ್’ಗೆ ಸೀಮಿತವಾಗಿಲ್ಲ, ಅದನ್ನು ವಿಶಾಲ ಅರ್ಥದಲ್ಲಿ ಅರ್ಥಮಾಡಿಕೊಳ್ಳಬೇಕು ಎಂದು ಒತ್ತಿ ಹೇಳಿದ್ದಾರೆ. ಈ ಬಗ್ಗೆ ಉದಾಹರಣೆ ನೀಡುತ್ತಾ, ಅವರು ಹೀಗೆ ವಿವರಿಸಿದರು: “ಟ್ರಾಫಿಕ್ ನಿಯಮಗಳು ಎಲ್ಲರಿಗೂ ಒಂದೇ. ವಾಹನವು ‘ಮತ’ ಇದ್ದಂತೆ, ಮತ್ತು ಟ್ರಾಫಿಕ್ ನಿಯಮಗಳನ್ನು ಪಾಲಿಸುವುದು ‘ಧರ್ಮ’. ಮತವನ್ನು ಬದಲಾಯಿಸಬಹುದು, ಆದರೆ ಧರ್ಮವನ್ನು ಬದಲಾಯಿಸಲಾಗದು. ಮತ ಬದಲಾಯಿಸುವ ಉದ್ದೇಶಗಳು ತಪ್ಪಾಗಿದ್ದರೆ, ಎಚ್ಚರ ವಹಿಸಿ ಅಂತಹ ಕೃತ್ಯಗಳನ್ನು ತಡೆಯುವ ಅಗತ್ಯವಿದೆ ” ಎಂದರು ತಿಳಿಸಿ ಹೇಳಿದರು.
ಜಾತ್ಯತೀತತೆಯ ಪರಿಕಲ್ಪನೆ ಮತ್ತೊಂದು ಪ್ರಶ್ನೆಗೆ ಉತ್ತರಿಸಿ, ಜಾತ್ಯತೀತತೆಯ ಪರಿಕಲ್ಪನೆಯ ಬಗ್ಗೆ ಕೆಲವರು ಹಠಮಾರಿತನ ತೋರುತ್ತಿರುವುದರಿಂದ, ಕೆಲವರು ತಮ್ಮನ್ನು ಹಿಂದೂ ಎಂದು ಗುರುತಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎಂದು ಹೇಳಿದರು. ಹಿಂದೂತ್ವದ ಮೂಲ ವಿಚಾರಗಳನ್ನು ಯುವ ಪೀಳಿಗೆಗೆ ತಲುಪಿಸಬೇಕು ಎಂದು ತಿಳಿಸಿದ್ದಾರೆ.
1975 ರ ತುರ್ತು ಪರಿಸ್ಥಿತಿ ಮತ್ತು ಅಯೋಧ್ಯೆಯ ರಾಮ ಜನ್ಮಭೂಮಿ ಚಳವಳಿಯ ಸಮಯದಲ್ಲಿ ಆರ್ಎಸ್ಎಸ್ ಸ್ವಯಂಸೇವಕರ ಹೋರಾಟಗಳನ್ನು ಹೊಸಬಾಳೆ ನೆನಪಿಸಿಕೊಂಡರು. ಕಳೆದ ಶತಮಾನದಲ್ಲಿ ಸಂಘವು ಸಮಾಜದ ಬೆಂಬಲದಿಂದ ಒಂದು ಲಕ್ಷಕ್ಕೂ ಹೆಚ್ಚು ಸೇವಾ ಚಟುವಟಿಕೆಗಳನ್ನು ನಡೆಸಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಪ್ರತಿನಿಧಿಗಳು ಭಾಗವಹಿಸಿದ್ದರು.



