ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ನಾಯಕ ಅಲ್ಲ. ಅವರು ಕುರುಬರ ನಾಯಕರು ಅಷ್ಟೇ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ನವದೆಹಲಿಯಲ್ಲಿ ಈ ಕುರಿತು ಮಾತನಾಡಿದ ಅವರು, ಅಹಿಂದದಲ್ಲಿ ಹತ್ತಾರು ಜಾತಿಗಳಿವೆ. ಆ ಜಾತಿಯವರು ಯಾರೂ ಸಿದ್ದರಾಮಯ್ಯ ಅವರನ್ನು ನಾಯಕನೆಂದು ಒಪ್ಪಿಕೊಂಡಿಲ್ಲ. ಅವರು ಯಾವ ರೀತಿಯ ಒಬಿಸಿ ನಾಯಕ ಎಂದು ಪ್ರಶ್ನಿಸಿದರು.
ಓಬಿಸಿಯಲ್ಲಿ ಈಡಿಗ, ಮಡಿವಾಳ, ಸವಿತಾ ಸಮಾಜ, ಮರಾಠ, ಕಂಬಾರ, ಕುಂಬಾರರು, ವಿಶ್ವಕರ್ಮ ಸೇರಿದಂತೆ ಬಹಳಷ್ಟು ಸಮುದಾಯ ಇದೆ. ಆ ಸಮಾಜಗಳು ನಮ್ಮ ನಾಯಕ ಸಿದ್ದರಾಮಯ್ಯ ಎಂದು ಎಲ್ಲಿ ಒಪ್ಪಿಕೊಂಡಿದ್ದಾರೆ? ಅವರು ಯಾವ ರೀತಿಯ ಓಬಿಸಿ ನಾಯಕ? ಅಲ್ಪಸಂಖ್ಯಾತರ ಮತ ಕಾಂಗ್ರೆಸ್ ಜೊತೆಗಿದೆ, ಅದು ಸಿದ್ದರಾಮಯ್ಯ ವೋಟ್ ಅಲ್ಲ, ಸಿದ್ದರಾಮಯ್ಯ ಅಹಿಂದಾ ನಾಯಕ ಅಲ್ಲ ಎಂದು ಹೇಳಿದ್ದಾರೆ.
ಅದಲ್ಲದೇ ಅಲ್ಪಸಂಖ್ಯಾತರ ಮತ ಕಾಂಗ್ರೆಸ್ ಜತೆಗೆ ಇದೆ. ಅದು ಸಿದ್ದರಾಮಯ್ಯ ಅವರ ಮತ ಬ್ಯಾಂಕ್ ಅಲ್ಲ. ಅಹಿಂದ ನಾಯಕನೆಂದು ಬಿಂಬಿಸಿಕೊಂಡು ಹೈಕಮಾಂಡ್ ಅನ್ನು ಬೆದರಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದಿದ್ದಾರೆ. ಹಾಗೂ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಬಗ್ಗೆ ಪಕ್ಷದಲ್ಲಿ ಇನ್ನೂ ತೀರ್ಮಾನ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುವುದು ನಿಶ್ಚಿತ, ಹೊಸ ಸಿಎಂ ಯಾರು ಎನ್ನುವುದು ಗೊತ್ತಿಲ್ಲ. ಆದರೆ ಯಾರೇ ಸಿಎಂ ಆದರೂ ಕಾಂಗ್ರೆಸ್ ಪಕ್ಷದಿಂದ ರಾಜ್ಯಕ್ಕೆ ಒಳ್ಳೆಯದಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಬಳಿಕ ರಾಜ್ಯದಲ್ಲಿ ಆಡಳಿತ ಕುಸಿದು ಬಿದ್ದಿದ್ದು. ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ. ಸೂಟ್ಕೇಸ್ ತಲುಪಿಸುವ ಸ್ಪರ್ಧೆಯಲ್ಲಿ ಭ್ರಷ್ಟಾಚಾರ ಆಕಾಶಕ್ಕೆ ಮುಟ್ಟಿದೆ. ಸಿಎಂ ಯಾರು ಆಗಬೇಕು ಅದು ಅವರ ಪಕ್ಷದ ತಿರ್ಮಾನ. ಆದರೆ ಮುಖ್ಯಮಂತ್ರಿ ಬದಲಾವಣೆ ನಿಶ್ಚಿತ ಎಂದಿದ್ದಾರೆ.



