ಬೆಳಗಾವಿ : ಕರ್ನಾಟಕ ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಕದನ ರೋಚಕ ಘಟ್ಟ ತಲುಪಿದೆ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲೇ ಪಕ್ಷವು ಸಿಎಂ ಸಿದ್ದರಾಮಯ್ಯ ಬಣ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಣಗಳಾಗಿ ಸ್ಪಷ್ಟವಾಗಿ ಇಬ್ಬಾಗವಾಗಿರುವಂತೆ ಕಾಣಿಸುತ್ತಿದೆ. ಈ ಹಿಂದೆ ನಡೆಸಿದ ‘ಬ್ರೇಕ್ಫಾಸ್ಟ್ ಮೀಟಿಂಗ್’ ಕೇವಲ ರಾಜ್ಯ ಮಟ್ಟದಲ್ಲಿ ಗೊಂದಲ ಬಗೆಹರಿಸುವ ಪ್ರಯತ್ನ ಆಗಿತ್ತು. ಅಧಿವೇಶನದ ಸಂದರ್ಭದಲ್ಲಿ, ಯಾವುದೇ ಗೊಂದಲಗಳಿಲ್ಲ ಎಂದು ಬಿಂಬಿಸಲು ಹೈಕಮಾಂಡ್ ನಾಯಕರು ಪ್ರಯತ್ನಿಸಿದ್ದರು ಅಷ್ಟೆ. ಆದರೆ, ಬೆಳಗಾವಿಗೆ ಬಂದ ಕೂಡಲೇ ಎಲ್ಲವೂ ಹಳೇ ಸ್ಥಿತಿಗೆ ಮರಳಿದೆ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ತಮ್ಮ ಬೆಂಬಲಿಗರ ಸಂಖ್ಯೆಯನ್ನು ಪ್ರದರ್ಶಿಸಲು ಪ್ರತ್ಯೇಕ ಡಿನ್ನರ್ ಮೀಟಿಂಗ್ಗಳನ್ನು ಆಯೋಜಿಸಿದ್ದಾರೆ. ಔತಣ ಕೂಟದ ವೇಳೆ, ತಮಗೆ 100ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ ಎಂದು ಆಪ್ತರ ಬಳಿ ಡಿಕೆ ಶಿವಕುಮಾರ್ ಹೇಳಿಕೊಂಡಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಡಿನ್ನರ್ನಲ್ಲಿ ಭಾಗವಹಿಸಿದ್ದ ಶಾಸಕರಿಗೆ ಈ ಭರವಸೆಯನ್ನು ಡಿಸಿಎಂ ನೀಡಿದ್ದಾರೆ. ಸಚಿವ ಸ್ಥಾನ ಉಳಿಸಿಕೊಳ್ಳಲು ಮತ್ತು ಮುಂದಿನ ಭವಿಷ್ಯದ ಲೆಕ್ಕಾಚಾರದಲ್ಲಿ ಹಲವು ಸಚಿವರು ಮತ್ತು ಶಾಸಕರು ಡಿ.ಕೆ. ಶಿವಕುಮಾರ್ ಅವರಿಗೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.
ಡಿಕೆ ಶಿವಕುಮಾರ್ ಅವರು ತಮಗೆ ಇರುವ ಬೆಂಬಲವನ್ನು, ರಾಜ್ಯ ರಾಜಕಾರಣವನ್ನು ಗಮನಿಸುತ್ತಿರುವ ಹೈಕಮಾಂಡ್ ನಾಯಕರಿಗೂ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಡಿಸೆಂಬರ್ 20 ಮತ್ತು 21ರಂದು ದೆಹಲಿಯಲ್ಲಿ ನಡೆಯಲಿರುವ ಹೈಕಮಾಂಡ್ ನಾಯಕರ ಸಭೆಯಲ್ಲಿ ತಮ್ಮೊಂದಿಗೆ ಇರುವ ಶಾಸಕರ ಸಂಖ್ಯೆಯನ್ನು ಪ್ರಸ್ತುತಪಡಿಸಲು ಡಿ.ಕೆ. ಶಿವಕುಮಾರ್ ಯೋಜಿಸಿದ್ದಾರೆ. ಇದಕ್ಕಾಗಿಯೇ ಡಿಕೆಶಿ ಅವರು ತಮ್ಮೊಂದಿಗೆ 100ಕ್ಕೂ ಹೆಚ್ಚು ಶಾಸಕರಿದ್ದಾರೆ ಎಂದು ಸಂದೇಶ ರವಾನಿಸಿದ್ದಾರೆ ಎಂದು ವರದಿಯಾಗಿದೆ.



