ಬೆಂಗಳೂರು : ಉದ್ಯಮಿ ಮೇಲೆ ಏರ್ ಗನ್ನಿಂದ ದುಷ್ಕರ್ಮಿಗಳು ಫೈರಿಂಗ್ ಮಾಡಿರುವಂತಹ ಘಟನೆ ನಗರದ ಬಸವನಗುಡಿಯ ಕೃಷ್ಣರಾವ್ ಪಾರ್ಕ್ನಲ್ಲಿ ಗುರುವಾರ ರಾತ್ರಿ ನಡೆದಿದೆ. ನರ್ತಕಿ ಹಾಗೂ ಕಾರ್ಗಿಲ್ ಬಾರ್ ಮಾಲೀಕ, ಉದ್ಯಮಿ ರಾಜಗೋಪಾಲ್ ಮೇಲೆ ಫೈರಿಂಗ್ ಮಾಡಲಾಗಿದ್ದು, ಕತ್ತಿನ ಭಾಗಕ್ಕೆ ಗಾಯವಾಗಿದೆ. ಜಯನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಆರೋಪಿಗಾಗಿ ಬಸವನಗುಡಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ದೂರುದಾರರ ಮಾಹಿತಿ ಆಧರಿಸಿ FIR ದಾಖಲಿಸಲಾಗಿದೆ.
ಬಸವನಗುಡಿಯ ಕೃಷ್ಣರಾವ್ ಪಾರ್ಕ್ಗೆ ರಾಜಗೋಪಾಲ್, ಸ್ನೇಹಿತರ ಭೇಟಿಗೆ ಬಂದಿದ್ದರು. ರಸ್ತೆಗೆ ಅಂಟಿಕೊಂಡಂತೆ ಪಾರ್ಕ್ ಇದೆ. ಇತ್ತ ಉದ್ಯಮಿ ಪಾರ್ಕ್ನಲ್ಲಿ ವಾಕ್ ಮಾಡುತ್ತಿರುವಾಗ ಗನ್ ಫೈರ್ ಆಗಿದೆ. ಹೀಗಾಗಿ ರಸ್ತೆಯಲ್ಲಿ ನಿಂತು ಏರ್ ಗನ್ನಿಂದ ಫೈರ್ ಮಾಡಿರಬಹುದು ಎಂಬ ಅನುಮಾನಗಳು ಹುಟ್ಟಿಕೊಂಡಿವೆ.
ಸದ್ಯ ಬಸವನಗುಡಿ ಹಾಗೂ CCB ತಂಡದಿಂದ ಪ್ರಕರಣದ ತನಿಖೆ ನಡೆದಿದೆ. ಯಾವುದೇ ವ್ಯಕ್ತಿಗಳ ಮೇಲೆ ಅನುಮಾನವಿಲ್ಲ. ಈತನಕ ಕೂಡ ಯಾವ ಬೆದರಿಕೆ ಕರೆಯೂ ಬಂದಿಲ್ಲ. ಏಕೆ ಫೈರಿಂಗ್ ಆಯ್ತು? ಯಾವ ಕಾರಣಕ್ಕೆ ಫೈರಿಂಗ್ ಮಾಡಿದರು ಗೊತ್ತಿಲ್ಲ. ಆದರೆ ಏರ್ ಗನ್ನಿಂದ ಫೈರಿಂಗ್ ಆಗಿದೆ ಎಂದು ಉದ್ಯಮಿ ರಾಜಗೋಪಾಲ್ ಹೇಳಿದ್ದಾರೆ. ಹೀಗಾಗಿ ಅದು ಏರ್ ಗನ್ ಹೌದೋ ಅಲ್ಲವೋ ಎನ್ನುವ ಬಗ್ಗೆ ತನಿಖೆ ನಡೆದಿದೆ.
ಇನ್ನು ಘಟನಾ ಸ್ಥಳಕ್ಕೆ CCB ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜೊತೆಗೆ ಉದ್ಯಮಿ ರಾಜ್ ಗೋಪಾಲ್ ದಾಖಲಾಗಿರುವ ಬೆಂಗಳೂರು ಆಸ್ಪತ್ರೆಗೆ ಬಸವನಗುಡಿ ಹಾಗೂ CCB ಇನ್ಸ್ಪೆಕ್ಟರ್ಗಳ ತಂಡ ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಯಾರಾದರೂ ಹತ್ಯೆಗೆ ಸಂಚು ರೂಪಿಸಿದ್ದರಾ ಎಂಬ ಬಗ್ಗೆ ತನಿಖೆ ನಡೆದಿದ್ದು, ಮೇಲ್ನೋಟಕ್ಕೆ ಟಾರ್ಗೆಟ್ ಮಾಡಿ ಹೊಡೆದಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಉದ್ಯಮಿ ರಾಜಗೋಪಾಲ್ ಕೋಟ್ಯಂತರ ರೂ. ವ್ಯವಹಾರ ಹೊಂದಿದ್ದಾರೆ. ನರ್ತಕಿ ಬಾರ್, ಮೆಜೆಸ್ಟಿಕ್ ಸುತ್ತಮುತ್ತ ಅಂಗಡಿಗಳಿಂದ ಬಾಡಿಗೆ ಬರುತ್ತದೆ.



