ಬೆಂಗಳೂರು: ಆಹಾರ, ಉಡುಪು, ಭಾಷೆ ಮತ್ತು ಸಂಸ್ಕೃತಿಯ ಆಯ್ಕೆಯ ವಿಚಾರದಲ್ಲಿ ಭಾರತದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗುತ್ತಿದೆ. ಈ ಸತ್ಯವನ್ನು ಒಪ್ಪಿಕೊಂಡು ಮುಂದುವರೆಯದಿದ್ದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಹೇಳಿದರು.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವು ಗುರುವಾರ ನಗರದಲ್ಲಿ ಆಯೋಜಿಸಿದ್ದ ಅಲ್ಪಸಂಖ್ಯಾತ ಹಕ್ಕುಗಳ ದಿನಾಚರಣೆಯ ಕಾರ್ಯಕ್ರಮದಲ್ಲಿ ರಿಜ್ವಾನ್ ಅರ್ಷದ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಈ ವೇಳೆ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಡಿತಗೊಳಿಸದೆ ಸಂವಿಧಾನವನ್ನು ಸರಿಯಾಗಿ ಜಾರಿಗೆ ತರುತ್ತಿದ್ದಾರೆಯೇ ಎಂಬುದನ್ನು ಗಮನಿಸುವುದು ಅತ್ಯಂತ ಅಗತ್ಯ. ಅಂತೆಯೇ ಸಂಸತ್ತಿನಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನಿರ್ದಿಷ್ಟ ನಿರ್ಣಯಗಳು ಮತ್ತು ಕಾನೂನುಗಳನ್ನು ತರಲಾಗುತ್ತಿದ್ದು, ಧರ್ಮಾಂತರ ನಿಷೇಧ ಕಾಯ್ದೆ, ವಕ್ಫ್ ತಿದ್ದುಪಡಿ ಮಸೂದೆ, ಸಿಎಎ–ಎನ್ಆರ್ಸಿ ಮುಂತಾದವುಗಳು ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಜಾರಿಗೆ ತರಲಾಗಿದೆ.
ಹೀಗಾಗಿ ಎಲ್ಲಾ ಅಲ್ಪಸಂಖ್ಯಾತರು ಒಗ್ಗೂಡಿ ಭಾರತವನ್ನು ‘ವಿಶ್ವಗುರು’ವಾಗಿಸಲು ಕೆಲಸ ಮಾಡಬೇಕು. ಕೋಮು ರಾಜಕೀಯವನ್ನು ಪ್ರೋತ್ಸಾಹಿಸುವುದನ್ನು ನಿಲ್ಲಿಸಲು ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮುಸ್ಲಿಮರು, ಪಾರ್ಸಿ, ಸಿಖ್, ಬೌದ್ಧ ಮತ್ತು ಜೈನ್ ಸಮುದಾಯಗಳಿಗೆ ಸೇರಿದ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.



