ಬೆಂಗಳೂರು: ಕಾಸರಗೋಡು ಕರ್ನಾಟಕದ ಒಂದು ಭಾಗ ಎಂಬುವುದು ನಮ್ಮ ಪ್ರತಿಪಾದನೆಯಾಗಿದೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದರು. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಲಯಾಳಂ ಭಾಷಾ ಮಸೂದೆ 2025ಯನ್ನು ಕೇರಳ ಸರ್ಕಾರ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿ, ಅವರವರ ರಾಜ್ಯಗಳ ಭಾಷೆಗಳನ್ನು ರಾಜಕಾರಣ ಕ್ಕೆ ಬಳಸಿಕೊಳ್ಳೋದು ಸಹಜವಾಗಿ ನಡೆಯುತ್ತದೆ.
ಕಾಸರಗೋಡು ಕರ್ನಾಟಕದ ಒಂದು ಭಾಗ ಅನ್ನೋದು ನಮ್ಮ ಪ್ರತಿಪಾದನೆ. ಒತ್ತಡ ಹಾಕೋದರಿಂದ ಗಡಿಯಲ್ಲಿ ಉತ್ತಮ ಬಾಂಧವ್ಯ ಉಂಟಾಗುವುದಿಲ್ಲ. ಈ ಬಾಂಧವ್ಯಕ್ಕೆ ಧಕ್ಕೆ ತರುವ ಕೆಲಸ ಅಲ್ಲಿನ ಸರ್ಕಾರ ಮಾಡ್ತಿದೆ, ಇದು ಸರಿಯಿಲ್ಲ ಎಂದರು.
ಕೇರಳದಲ್ಲಿ ಚುನಾವಣೆಗೋಸ್ಕರವೇ ಇದನ್ನೆಲ್ಲಾ ಮಾಡಲಾಗುತ್ತಿದೆ ಆದರೆ ಕನ್ನಡಿಗರಿಗೆ ತೊಂದರೆ ಮಾಡಬಾರದು ಅಷ್ಟೇ. ಕರ್ನಾಟಕ ಹಾಗೂ ಕೇರಳದ ನಡುವಿನ ಉತ್ತಮ ಬಾಂಧವ್ಯಕ್ಕೆ ಧಕ್ಕೆ ಆಗಬಾರದು. ನಮ್ಮಲ್ಲಿರುವ ಮಲಯಾಳಿ ಭಾಷಿಕರ ಮೇಲೆ ಬೇರೆ ರೀತಿ ಪರಿಣಾಮ ಆಗಬಾರದು ಎಂದು ಹೇಳಿದರು.
ಇನ್ನೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಕೇರಳದಲ್ಲಿ ಅಧಿಕಾರದಲ್ಲಿ ಇಲ್ಲ. ಒಂದು ವೇಳೆ ಇದ್ದಿದ್ದರೆ ನಾವು ಇದರ ಬಗ್ಗೆ ಪ್ರತಿಕ್ರಿಯೆ ನೀಡಬಹುದಿತ್ತು. ಆದರೂ ಕೆಸಿ ವೇಣುಗೋಪಾಲ್ ಅವರು ಕೂಡ ಎರಡು ರಾಜ್ಯಗಳ ನಡುವಿನ ಬಾಂಧವ್ಯದ ಬಗ್ಗೆ ಮಾತಾಡಬೇಕು. ಅಲ್ಲಿರುವ ಕನ್ನಡಿಗರ ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಗೃಹ ಇಲಾಖೆಯಲ್ಲಿ ಡಿಕೆ ಶಿವಕುಮಾರ್ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪದ ಕುರಿತಾಗಿ ಪ್ರತಿಕ್ರಿಯೆ ನೀಡಿದ ಸುರೇಶ್, ಕುಮಾರಸ್ವಾಮಿ ಅವರೇ ಇದನ್ನೆಲ್ಲಾ ಬಿಡಿ. ದಯವಿಟ್ಟು ಹೆಚ್ಎಂಟಿ ಯವರಿಗೆ ನ್ಯಾಯ ಕೊಡಿಸಿ. ಸುಮ್ಮನೆ ಇಲ್ಲದೇ ಇರೋದನ್ನು ಯಾಕೆ ಹೇಳ್ತೀರಿ ಎಂದು ತಿರುಗೇಟು ನೀಡಿದ್ದಾರೆ.
ಇನ್ನೂ ಶಾಸಕ ಗಣಿಗ ರವಿ ಸರ್ಕಾರ ಜಾಗ ಗುರುತಿಸಿದ್ದಾರೆ. ನಿಮ್ಮ ಇಲಾಖೆಯಿಂದ ಏನು ಮಾಡಿದ್ದೀರಿ ಹೇಳಿ. ಉದ್ಯೋಗ ಕೊಡಿಸೋದನ್ನು ನೋಡಿ. ಜೆಡಿಎಸ್ ನವರಿಗೆ ಕೆಲಸ ಇಲ್ಲ. ಸಿಡಿ ಫ್ಯಾಕ್ಟರಿ ಇದ್ದಿದ್ದು ಹೊಳೆ ನರಸೀಪುರದಲ್ಲಿ, ಪದ್ಮನಾಭ ನಗರದಲ್ಲಿ. ಆ ಫ್ಯಾಕ್ಟ್ರಿಯಲ್ಲಿ ಯಾರು ಮ್ಯಾನಿಫ್ಯಾಕ್ಚರ್ ಮಾಡ್ತಿದ್ದರು? ಎಂದು ತಿರುಗೇಟು ನೀಡಿದ್ದಾರೆ.



