ಚಾಮರಾಜನಗರ : ಭಾರತೀಯ ಸನಾತನ ಧರ್ಮದಲ್ಲಿ ಹಬ್ಬಗಳಿಗೆ ವಿಶೇಷವಾದ ಮಹತ್ವವಿದೆ. ಹಬ್ಬಗಳ ಆಚರಣೆಯಿಂದ ಪೌರಾಣಿಕ ,ಆದ್ಯಾತ್ಮಿಕ ಹಾಗೂ ವೈಜ್ಞಾನಿಕ ಮಹತ್ವವನ್ನು ತಿಳಿಯಬಹುದು .ಹಬ್ಬಗಳು ಹಿಂದುಧರ್ಮದ ಬೇರುಗಳಾದ ಸಂಸ್ಕೃತಿ ಮತ್ತು ಸಂಪ್ರದಾಯಗಳೊಂದಿಗೆ ಸಂಪರ್ಕ ಸಾಧಿಸಿ ,ಉತ್ತಮ ಜೀವನವನ್ನು ನಡೆಸಲು ಸಹಾಯಕವಾಗಿದೆ ಎಂದು ಜೈ ಹಿಂದ್ ಪ್ರತಿಷ್ಠಾನದ ಉಪಾಧ್ಯಕ್ಷರು ಹಾಗೂ ಶಿಕ್ಷಕರಾದ ಮೈಸೂರು ವಿಜಯಲಕ್ಷ್ಮಿಯವರು ತಿಳಿಸಿದರು.
ಅವರು ಋಗ್ವೇದಿ ಯೂತ್ ಕ್ಲಬ್ ಜೈ ಹಿಂದ್ ಪ್ರತಿಷ್ಠಾನ ಜೈಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಮಕರ ಸಂಕ್ರಾಂತಿ ವಿಶೇಷ ಹಾಗೂ ಭಾರತೀಯ ಸೈನ್ಯ ದಿನದ ಮಹತ್ವ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿ ಮಕ್ಕಳಿಗೆ ಹಾಗೂ ಯುವ ಜನಾಂಗಕ್ಕೆ ಹಬ್ಬಗಳನ್ನು ಏಕೆ ಆಚರಿಸಬೇಕು ಎಂಬುದರ ಮಹತ್ವವನ್ನು ತಿಳಿಸುವುದರ ಜೊತೆಗೆ ಹಿರಿಯರು ಮತ್ತು ಕಿರಿಯರಿಗೆ ತಿಳುವಳಿಕೆ ನೀಡಿ ಅಗತ್ಯವಾದ ಮೌಲ್ಯಗಳು, ಇತಿಹಾಸ, ಹಬ್ಬಗಳ ಮಾಹಿತಿಯನ್ನು ತಿಳಿಸಿದಾಗ ಮಕ್ಕಳಿಗೆ ಆಸಕ್ತಿ, ಪ್ರೀತಿ, ವಿಶ್ವಾಸ ,ಅಭಿಮಾನ ಮೂಡುತ್ತದೆ ಎಂದು ತಿಳಿಸಿದರು.
ಜೈ ಹಿಂದ್ ಪ್ರತಿಷ್ಠಾನದ ಕುಸುಮರವರು ಮಾತನಾಡಿ ಮಕರ ಸಂಕ್ರಾಂತಿ ಉತ್ತರಾಯಣ ಪುಣ್ಯಕಾಲ ಪ್ರಾರಂಭವಾಗುವ ದಿನ. ಸಂಕ್ರಾಂತಿಯನ್ನು ಸುಗ್ಗಿ ಹಬ್ಬವೆಂದು ಕರೆಯುತ್ತಾರೆ. ಕರ್ನಾಟಕದಲ್ಲಿ ಎಳ್ಳು ಬೆಲ್ಲ ,ಸಕ್ಕರೆ ಅಚ್ಚು, ಬಾಳೆಹಣ್ಣು ,ಕಬ್ಬು ಗಳನ್ನು ಬಂಧು ಮಿತ್ರರಿಗೆ ಹಂಚುವ ಸಂಪ್ರದಾಯ ವಿಶೇಷವಾಗಿದೆ. ಪರಸ್ಪರ ವಿಶ್ವಾಸ, ಸ್ನೇಹ, ಪ್ರೀತಿ ,ಅಮರ ಬಾಂಧವ್ಯಗಳನ್ನು ಗಟ್ಟಿಗೊಳಿಸುವ ಜೊತೆಗೆ ಅವರನ್ನು ಪ್ರೀತಿಸಿ ಗೌರವಿಸುವ ಸಂಪ್ರದಾಯ ಮಹತ್ತರವಾದದ್ದು . ಮಕ್ಕಳಿಗೆ ವಿಶೇಷವಾಗಿ ಸಂಕ್ರಾಂತಿ ಹಬ್ಬ ಉಲ್ಲಾಸ ಸಡಗರ ಆನಂದವನ್ನು ತರುತ್ತದೆ ಎಂದರು.
ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಅಧ್ಯಕ್ಷತೆಯನ್ನು ವಹಿಸಿ ಋಗ್ವೇದಿ ಯೂತ್ ಕ್ಲಬ್ ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ಸಂಭ್ರಮ ಹಾಗೂ ಜನವರಿ 15 ಭಾರತೀಯ ಸೈನಿಕ ದಿನವಾಗಿ ಆಚರಿಸಿ ಉತ್ಸಾಹ ಹಾಗೂ ರಾಷ್ಟ್ರೀಯ ಪ್ರಜ್ಞೆಯನ್ನು ಬೆಳೆಸುತ್ತಿರುವುದು ಹೆಮ್ಮೆ. ಭಾರತೀಯ ಸೈನಿಕರಿಗೆ ಸ್ಪೂರ್ತಿ,ಶಕ್ತಿ ಗೌರವ ನೀಡುವ ದಿನ. ಗಡಿ ರಕ್ಷಣೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿ ಇಡುವ ಸೈನಿಕರ ರಾಷ್ಟ್ರಭಕ್ತಿಯನ್ನು ಸದಾ ಕಾಲ ಗೌರವಿಸಬೇಕು. ಭಾರತೀಯರ ಸೈನಿಕ ವ್ಯವಸ್ಥೆ ಜಗತ್ತಿಗೆ ಮಾದರಿಯಾಗಿದೆ ಸೈನಿಕ ಶಿಸ್ತು, ಸಂಯಮ, ಬದ್ಧತೆಯನ್ನು ಎಲ್ಲರೂ ಪಾಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸುರೇಶಜೋಶಿ, ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷರಾದ ಶರಣ್ಯ, ಸಾನಿಕ, ಶ್ರಾವ್ಯ, ಮಮತಾ, ಮಹಾಲಕ್ಷ್ಮಿ, ಕನಕ,ಪೂಜಾ ಇದ್ದರು.ಎಲ್ಲರಿಗೂ ಎಳ್ಳು ಬೆಲ್ಲ ನೀಡಿ ಶುಭಾಶಯ ಕೋರಲಾಯಿತು.



