ಬೆಂಗಳೂರು: ಚಿತ್ರದುರ್ಗ ಖಾಸಗಿ ಬಸ್ ಅಗ್ನಿದುರಂತದ ಬಳಿಕ ಎಚ್ಚೆತ್ತಿರುವ ರಾಜ್ಯ ಸರ್ಕಾರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸೂಚನೆ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಮಹತ್ವದ ಸಭೆ ನಡೆಸಿದ್ದು, ರಾಜ್ಯದ ಖಾಸಗಿ ಬಸ್ ಮಾಲೀಕರು,ಬಸ್ ಕೋಚ್ ನಿರ್ಮಾಣ ಕಂಪನಿಗಳ ಮಾಲೀಕರು ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದರು.
ಈ ಸಭೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಯಾವ ರೀತಿಯಲ್ಲಿ ಬಸ್ ಗಳಲ್ಲಿ ವ್ಯವಸ್ಥೆ ಇರಬೇಕು. ಎಷ್ಟು ಎಮರ್ಜೆನ್ಸಿ ಡೋರ್ ಇಡಬೇಕು? ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದ್ದು, ಅಂತಿಮವಾಗಿ 8 ನಿಯಮಗಳ ಕಡ್ಡಾಯ ಪಾಲನೆ ಮಾಡುವಂತೆ ಖಡಕ್ ಸೂಚನೆ ನೀಡಿದ್ದಾರೆ.
ಪ್ರಯಾಣಿಕರಿಗೆ ಯಾವ ರೀತಿಯಲ್ಲಿ ಮಾಹಿತಿ ನೀಡಬೇಕು? ಫೈರ್ ಎಸ್ಟಿಂಗ್ ವಿಷರ್ ಗಳನ್ನು ಅಳವಡಿಸುವ ಬಗ್ಗೆ, ಎಮರ್ಜೆನ್ಸಿ ಎಕ್ಸಿಟ್ ಡೋರ್ ಗಳ ಬಳಿ ಯುವಕರು ಮತ್ತು ಮಧ್ಯ ವಯಸ್ಕರಿಗೆ ಸೀಟ್ ನೀಡಬೇಕು, ಎಸಿ ಬಸ್ಸುಗಳಲ್ಲಿ ಬೆಂಕಿ ಕಾಣಿಸಿಕೊಂಡರೆ ಹೇಗೆ ನಂದಿಸಬೇಕು? ಹೊರಗೆ ಬರಲು ಗ್ಲಾಸ್ ಹೊಡೆಯಲು ಹ್ಯಾಮರ್ ಗಳನ್ನು ಇಡಬೇಕು? ಪ್ರಯಾಣಿಕರು ಡೋರ್ ಜಂಪ್ ಮಾಡಲು ಮೆಟ್ಟಿಲುಗಳ ವ್ಯವಸ್ಥೆ ಮಾಡಬೇಕು, ಬೆಂಕಿ ಕಾಣಿಸಿಕೊಂಡರೇ ಪ್ರಯಾಣಿಕರಿಗೆ ಡ್ರೈವರ್ ಅಲರಾಂ ನೀಡಬೇಕು.
ಹೀಗೆ ಖಾಸಗಿ ಬಸ್ ಮಾಲೀಕರಿಗೆ ಮತ್ತು ಬಸ್ ಬಾಡಿ ಬಿಲ್ಡಿಂಗ್ ಮಾಡುವ ಕಂಪನಿಗಳಿಗೆ ಸಾರಿಗೆ ಸಚಿವರು ಸೂಚನೆಯ ಜೊತೆಗೆ ಎಚ್ಚರಿಕೆ ನೀಡಿದ್ದಾರೆ.
ಸ್ಲೀಪರ್ ಬಸ್ ಗಳಿಗೆ 8 ನಿಯಮ ಪಾಲನೆ ಕಡ್ಡಾಯ
- ಸ್ಲೀಪರ್ ಬಸ್ ಗಳಲ್ಲಿ ಚಾಲಕರ ಹಿಂಬದಿ ಡೋರ್ ತೆಗೆಯಬೇಕು.
- ಸ್ಲೀಪರ್ ಬಸ್ ಗಳಲ್ಲಿ ಸ್ಲೈಡರ್ ತೆಗೆಯಬೇಕು.
- ಫೈರ್ ಡಿಟೆಕ್ಷನ್ ಅನ್ನು ತಿಂಗಳೊಳಗೆ ಅಳವಡಿಸಬೇಕು.
- 10ಕೆಜಿ ತೂಕದ ಅಗ್ನಿ ಶಾಮಕ ಸಾಧನ ಅಳವಡಿಕೆ ಕಡ್ಡಾಯ.
- ಚಾಸಿಸ್ ಅನಧಿಕೃತ ವಿಸ್ತರಣೆಗೆ ಬ್ರೇಕ್.
- ಅನುಮೋದಿತ ಟೆಸ್ಟಿಂಗ್ ಏಜೆನ್ಸಿಯಿಂದ ಪ್ರಮಾಣ ಪತ್ರ ಕಡ್ಡಾಯ.
- ಪ್ರಯಾಣಿಕರ ಸೇಫ್ಟಿ ಮಾನದಂಡ ಇದ್ದರೆ ಮಾತ್ರ ಎಫ್ ಸಿ ಮಾಡಬೇಕು.
- ಬಸ್ ಕವಚ ನಿರ್ಮಾಣ ಸಂಸ್ಥೆ ಸಿಂಧುತ್ವ ಪರಿಶೀಲಿಸಿದ ನಂತರವೇ ನೋಂದಣಿ ಮಾಡಬೇಕು.



