ಕೆ.ಆರ್.ನಗರ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಪಂಚ ಗ್ಯಾರಂಟಿ ಕಾರ್ಯಕ್ರಮಗಳನ್ನು ಸಕಾಲದಲ್ಲಿ ಸಮರ್ಪಕವಾಗಿ ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಸ್.ಮಹದೇವ್ ಹೇಳಿದರು.
ಪಟ್ಟಣದ ತಾ.ಪಂ. ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಅಧಿಕಾರಿಗಳು ನಿಯಮಿತ ಅವಧಿಯಲ್ಲಿ ಗ್ಯಾರಂಟಿ ಯೋಜನೆಯದ ಫಲಾನುಭವಿಗಳನ್ನು ಭೇಟಿ ಮಾಡಿ ಅವರ ಅಭಿಪ್ರಾಯ ಪಡೆಯುವುದರ ಜತೆಗೆ ಅನುಕೂಲತೆಯನ್ನು ಕೇಳಿ ತಿಳಿಯಿರಿ ಎಂದರು.
ಶಕ್ತಿ ಯೋಜನೆಯಡಿ ಬಸ್ಸುಗಳಲ್ಲಿ ಸಂಚಾರ ಮಾಡುವ ಮಹಿಳಾ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಗಮನಹರಿಸಬೇಕು ಎಂದು ಕೆ.ಆರ್.ನಗರದ ಬಸ್ ಘಟಕ ವ್ಯವಸ್ಥಾಪಕರಿಗೆ ಸೂಚನೆ ನೀಡಿದ ಅಧ್ತಕ್ಷರು ಇದರ ಜತೆಗೆ ಅಗತ್ಯವಿರುವೆಡೆಗೆ ಬಸ್ ಸಂಚಾರ ನಡೆಸಿ ಎಂದು ಸೂಚಿಸಿದರು.
ಪಂಚ ಗ್ಯಾರಂಟಿ ಯೋಜನೆಗಳ ಪರಿಶೀಲನಾ ಸಭೆಗೆ ಸಂಬಂಧಿತ ಇಲಾಖೆಯ ಅಧಿಕಾರಿಗಳು ಬಾರದೆ ಕಛೇರಿ ಸಿಬ್ಬಂದಿಯನ್ನು ಕಳುಹಿಸಿದರೆ ಅದನ್ನು ಸಹಿಸುವುದಿಲ್ಲ ಎಂದು ಕಟ್ಟೆಚ್ಚರಿಗೆ ನೀಡಿದ ಅವರು ಮುಂದಿನ ಸಭೆಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳೇ ಹಾಜರಾಗಬೇಕು ಎಂದು ಆದೇಶಿಸಿದರು.
ಅಡುಗೆ ಅನಿಲವನ್ನು ಮನೆ ಮನೆಗಳಿಗೆ ಸರಬರಾಜು ಮಾಡುವವರು ನಿಗಧಿತ ದರಕ್ಕಿಂತ ಹೆಚ್ಚುವರಿಯಾಗಿ 40 ರಿಂದ 50 ರೂಗಳನ್ನು ಹೆಚ್ಚುವರಿಯಾಗಿ ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೋಳ್ಳಬೇಕೆಂದ ಎಂ.ಎಸ್.ಮಹದೇವ್ ಪಡಿತರ ವಿತರಣೆ ಮಾಡುವ ಅಂಗಡಿಗಳ ಮಾಲೀಕರು ಸರ್ಕಾರದ ನಿಯಮಾನುಸಾರ ವಿತರಣೆ ಮಾಡದೆ ಲೋಒವೆಸಗುತ್ತಿದ್ದು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡಬೇಕು ಎಂದು ತಾಕೀತು ಮಾಡಿದರು.
ಕೆಲವು ನ್ಯಾಯಬೆಲೆ ಅಂಗಡಿಗಳ ಮಾಲೀಕರು ಫಲಾನುಭವಿಗಳಿಂದ ಒಂದು ದಿನ ಹೆಬ್ಬೆಟ್ಟು ಮತ್ತೊಂದು ದಿನ ಪಡಿತರ ನೀಡುತ್ತಿದ್ದು ಈ ವ್ಯವಸ್ಥೆಯನ್ನು ಬದಲಿಸಬೇಕು ಎಂದು ಸಾಲಿಗ್ರಾಮ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉದಯಶಂಕರ್ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ತಾ.ಪಂ.ಇಒ ವಿ.ಪಿ.ಕುಲದೀಪ್, ಅನುಷ್ಠಾನ ಸಮಿತಿ ಸದಸ್ಯರಾದ ಸೈಯದ್ ಜಾಬೀರ್, ಜಿ.ಎಂ.ಹೇಮಂತ್, ಯತಿರಾಜ್, ಕೆಂಚಿಮಂಜು, ಮೋಹನ್ ದೇವರಹಟ್ಟಿ ಮತ್ತಿತರರು ಇದ್ದರು.



