Monday, February 9, 2026
Google search engine

Homeರಾಜಕೀಯಹಟ್ಟಿ ಚಿನ್ನದಗಣಿ ಕಂಪನಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಭೇಟಿ!

ಹಟ್ಟಿ ಚಿನ್ನದಗಣಿ ಕಂಪನಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಭೇಟಿ!

ಹಟ್ಟಿ ಚಿನ್ನದಗಣಿ : ಸ್ಥಳೀಯ ಹಟ್ಟಿ ಚಿನ್ನದಗಣಿ ಕಂಪನಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭೇಟಿ ನೀಡಿದ್ದು, ಗಣಿ ಕಂಪನಿಯ ಭೂಮಿಯ ಕೆಳಮೈಗೆ ತೆರಳಿ ವೀಕ್ಷಿಸುವ ಜತೆಗೆ ಚಿನ್ನದ ಅದಿರು ಉತ್ಪಾದನೆ ಬಗ್ಗೆ ಮಾಹಿತಿ ಪಡೆದರು.

ಲಿಂಗಸುಗೂರಿನಲ್ಲಿ ಜರುಗಿದ ವಿಧಾನ ಪರಿಷತ್‌ ಸದಸ್ಯ ಶರಣಗೌಡ ಪಾಟೀಲ್‌ ಬಯ್ಯಾಪುರ ಅವರ ಪುತ್ರನ ಮದುವೆಗೆ ಆಗಮಿಸಿದ ಹಿನ್ನೆಲೆ ಹಟ್ಟಿಚಿನ್ನದಗಣಿ ಕಂಪನಿಗೆ ಭಾನುವಾರ ಭೇಟಿ ನೀಡಿದ ಅವರು, ನ್ಯೂ ಸಕ್ರ್ಯೂಲರ್‌ ಶಾಫ್ಟ್‌ನ ಕೇಜ್‌ ಮೂಲಕ ಭೂಕೆಳಮೈಗೆ ತೆರಳಿ, 2000 ಫೀಟ್‌ ಲೆವಲ್‌ನಲ್ಲಿ ಚಿನ್ನದ ನಿಕ್ಷೇಪವಿರುವ ಅದಿರನ್ನು ವೀಕ್ಷಿಸಿದರು.

ಅಲ್ಲದೆ ಅದಿರು ಉತ್ಪಾದನೆ, ಭೂಕೆಳಮೈಯಿಂದ ಮೇಲ್ಮೈಗೆ ತರುವ ವಿಧಾನ, ತಂತ್ರಜ್ಞಾನ ಅಳವಡಿಕೆ, ಗಾಳಿ ಪೂರೈಕೆ ಮೊದಲಾದವುಗಳ ಬಗ್ಗೆ ಅಧಿಕಾರಿಗಳಿಂದ ತಿಳಿದುಕೊಂಡರು. ಹಾಗೇ ಭೂಕೆಳಮೈ ವೀಕ್ಷಣೆ ನಂತರ ಅದಿರು ಸಂಸ್ಕರಣೆ, ಅದಿರಿನಿಂದ ಚಿನ್ನವನ್ನು ಪ್ರತ್ಯೇಕಿಸಿ ಶುದ್ಧ ಚಿನ್ನ ತಯಾರಿಕೆಯ ಲೋಹ ವಿಭಾಗ ಸಹ ವೀಕ್ಷಣೆ ಮಾಡಿದರು.

ಇದೇ ಸಂದರ್ಭದಲ್ಲಿ ಕಾರ್ಮಿಕ ಸಂಘದ ಮುಖಂಡರು, ಮೆಡಿಕಲ್‌ ಅನ್‌ಫಿಟ್‌ ಜಾರಿಗೊಳಿಸಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಉಪಮುಖ್ಯಮಂತ್ರಿ ಬಳಿಯಲ್ಲಿ ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಬೆಂಗಳೂರಿಗೆ ಬನ್ನಿ ಈ ಬಗ್ಗೆ ಚರ್ಚಿಸೋಣ ಎಂದು ತಿಳಿಸಿದರು.

ನಂತರ ಪಟ್ಟಣದ ನೂತನ ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡಿ, ಮುಂದಿನ ಚುನಾವಣೆಯಲ್ಲಿ ಪಕ್ಷದ ಡಿ.ಎಸ್‌.ಹೂಲಗೇರಿ ಅವರನ್ನು ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಹೇಳಿ ತೆರಳಿದರು. ಸಂಸದ ಜಿ.ಕುಮಾರ ನಾಯಕ, ನಿಗಮದ ಅಧ್ಯಕ್ಷ ಜೆ.ಟಿ.ಪಾಟೀಲ್‌, ಮಾಜಿ ಶಾಸಕ ಡಿ.ಎಸ್‌.ಹೂಲಗೇರಿ, ಗಣಿ ಕಂಪನಿ ವ್ಯವಸ್ಥಾಪಕ ನಿರ್ದೇಶಕಿ ಶಿಲ್ಪಾ ಆರ್‌., ಇ.ಡಿ.ಪ್ರಕಾಶ ಬಹದ್ದೂರ್‌, ಜಿಎಂಸಿ ಶಫಿವುಲ್ಲಾಖಾನ್‌, ಹಿರಿಯ ವ್ಯವಸ್ಥಾಪಕ ಯಮನೂರಪ್ಪ ಗೌಡರ್‌, ಕಾರ್ಮಿಕ ಸಂಘದ ಎಸ್‌.ಎಂ.ಶಫಿ, ಶಾಂತಪ್ಪ ಅನ್ವರಿ, ವೆಂಕೋಬ್‌ ಮಿಯ್ಯಾಪುರ, ಸಿದ್ದಪ್ಪ ಮುಂಡರಿಗಿ, ಜಮದಗ್ನಿ ಕೋಠಾ, ಗುಂಡಪ್ಪಗೌಡ, ಮೈನುದ್ದೀನ್‌ ಇತರರಿದ್ದರು.

ಹಟ್ಟಿಗಣಿ ಕಂಪನಿ ಕಾರ್ಮಿಕರಿಂದ ಫೆ.12ಕ್ಕೆ ಮುಷ್ಕರ?

ಇನ್ನೂ ಕೇಂದ್ರ ಸರಕಾರ ಜಾರಿಗೊಳಿಸಲು ಮುಂದಾಗಿರುವ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ದೇಶವ್ಯಾಪಿ ಜಂಟಿ ಸಂಘಟನೆಗಳ ಒಕ್ಕೂಟ ಫೆ.12ರಂದು ಮುಷ್ಕರ ನಡೆಸಲು ಕರೆ ನೀಡಿದ್ದು, ಸ್ಥಳೀಯ ಗಣಿ ಕಾರ್ಮಿಕರು ಭಾಗವಹಿಸಲು ನಿರ್ಧರಿಸಿದ್ದಾರೆಂದು ಎಂದು ಕಾರ್ಮಿಕ ಸಂಘದ(ಸಿಐಟಿಯು) ಉಪಾಧ್ಯಕ್ಷ ಶಾಂತಪ್ಪ ಅನ್ವರಿ ಹೇಳಿದ್ದಾರು.

ನಾನಾ ಕೈಗಾರಿಕೆಗಳ ಕಾರ್ಮಿಕರು ದೇಶವ್ಯಾಪಿ ಮುಷ್ಕರ ಏಕೆ ನಡೆಸಲು ಉದ್ದೇಶಿಸಲಾಗಿದೆ ಎಂಬುದನ್ನು ಗಣಿ ಕಾರ್ಮಿಕರಿಗೆ ತಿಳಿಸಲು ಹಮ್ಮಿಕೊಂಡಿರುವ ಪ್ರಚಾರಾಂದೋಲನ ಸಭೆಯಲ್ಲಿ ಮಾತನಾಡಿದರು ಕಾರ್ಮಿಕರಿಗೆ ರಕ್ಷಣೆ ನೀಡುತ್ತಿದ್ದ ಈ ಮೊದಲಿನ 44 ಕಾಯಿದೆಗಳನ್ನು ತೆಗೆದು, ಮಾಲೀಕರಿಗೆ ಅನುಕೂಲವಾಗುವ ನಾಲ್ಕು ಕಾಯಿದೆಗಳನ್ನು ತರಲಾಗಿದೆ. ಈ ಕಾಯಿದೆಗಳು ಬರುವ ಏಪ್ರಿಲ್‌ 1 ರಿಂದ ಜಾರಿಯಾಗಲಿದ್ದು, ಅವು ಯಾವತ್ತೂ ಜಾರಿಯಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಗಣಿ ಆಡಳಿತವರ್ಗಕ್ಕೂ ಒತ್ತಾಯಿಸಲಾಗಿದ್ದು, ಮೆಡಿಕಲ್‌ ಅನ್‌ಫಿಟ್‌, ಪಿಎಲ್‌ಐಬಿ, ಕಾರ್ಮಿಕರ ಮಕ್ಕಳನ್ನು ಸಾಂದರ್ಭಿಕ ನೌಕರರನ್ನಾಗಿ ತೆಗೆದುಕೊಳ್ಳುವುದು, ಬಾಕಿ ಮನೆ ಬಾಡಿಗೆ ಭತ್ಯೆ, ಅಲೋವೆನ್ಸ್‌ಗಳಲ್ಲಿ ಬದಲಾವಣೆ ಸೇರಿ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಗಿದೆ.

ಈ ಸಂಬಂಧವಾಗಿ ಬಳ್ಳಾರಿಯ ಪ್ರಾದೇಶಿಕ ಕಾರ್ಮಿಕ ಆಯುಕ್ತರ(ಆರ್‌ಎಲ್‌ಸಿ) ಬಳಿಯಲ್ಲಿ ಗಣಿ ಆಡಳಿವರ್ಗ ಹಾಗೂ ಕಾರ್ಮಿಕ ಸಂಘದ ಮುಖಂಡರ ಮಧ್ಯೆ ಗುರುವಾರ ಮಾತುಕತೆ ನಡೆಸಲಾಗಿದ್ದು, ಫೆ.10 ರಂದು ಗಣಿ ಕಂಪನಿಯ ನಿರ್ದೇಶಕ ಮಂಡಳಿಯ ಸಭೆ ನಡೆಸಲಿದೆ. ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನಿಸುವುದಾಗಿ ಆಡಳಿವರ್ಗದ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಫೆ.11ಕ್ಕೆ ಆರ್‌ಎಲ್‌ಸಿಯವರು ಮರಳಿ ಸಭೆ ಕರೆದಿದ್ದು, ಅಲ್ಲಿನ ನಿರ್ಧಾರಗಳನ್ನು ನೋಡಿಕೊಂಡು ಫೆ.12ರ ಮುಷ್ಕರದ ನಂತರ ನಮ್ಮ ಹೋರಾಟ ಮುಂದುವರಿಸಬೇಕೋ ಬೇಡವೋ ಎಂಬುದನ್ನು ರಾಜ್ಯ ನಾಯಕರು ನಿರ್ಧರಿಸಲಿದ್ದಾರೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular