ಕೆ.ಆರ್.ನಗರ : ಪಟ್ಟಣದ ಹೊರ ವಲಯದ ಹಾಸನ- ಮೈಸೂರು ರಸ್ತೆಯಲ್ಲಿರುವ ಆದಿ ಶಕ್ತಿ ತೋಪಮ್ಮ ದೇವಿಯ ವಾರ್ಷಿಕ ಜಾತ್ರೆಯು ಅತ್ಯಂತ ವಿಜೃಂಭಣೆಯಿಂದ ಮಂಗಳವಾರ ನಡೆಯಿತು.
ಜಾತ್ರೆಯ ಅಂಗವಾಗಿ ಮುಂಜಾನೆಯಿಂದಲೆ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿ ದೇವರಿಗೆ ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿತ್ತು.
ಬೆಳಿಗ್ಗೆಯಿಂದ ಸಂಜೆಯವರೆಗೆ ಪಟ್ಟಣ ಸೇರಿದಂತೆ ಕೆ.ಆರ್.ನಗರ, ಹುಣಸೂರು, ಸಾಲಿಗ್ರಾಮ ತಾಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಕಳೆದ ಮೂರು ದಿನಗಳಿಂದ ಆದಿ ಶಕ್ತಿ ತೋಪಮ್ಮನವರ ಜಾತ್ರೆಯ ಹಿನ್ನೆಲೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಜತೆಗೆ ಸಂಪರ್ಕ ರಸ್ತೆಗಳಿಗೆ ದೀಪಾಲಂಕಾರ ಮಾಡಲಾಗಿತ್ತು.
ಜಾತ್ರೆಯ ಹಿನ್ನೆಲೆಯಲ್ಲಿ ವಿವಿಧ ಸಂಘ ಸಂಸ್ಥೆ ಮತ್ತು ದೇವಾಲಯದ ವತಿಯಿಂದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಮಾಡಲಾಗಿತ್ತಲ್ಲದೆ ಸಾವಿರಾರು ಮಂದಿ ಸ್ವಯಂ ಪ್ರೇರಣೆಯಿಂದ ಸೇವೆ ಸಲ್ಲಿಸಿದರು.
ಪಟ್ಟಣದ ನ್ಯಾಯಾಲಯದ ಕಿರಿಯ ಶ್ರೇಣಿ ನ್ಯಾಯಾಧೀಶ ಎಸ್.ಚಂದನ್, ಶಾಸಕ ಡಿ.ರವಿಶಂಕರ್ ಸೇರಿದಂತೆ ವಿವಿಧ ರಾಜಕೀಯ ಪಕ್ಷದ ಮುಖಂಡರು ಗ್ರಾ.ಪಂ.ಮಾಜಿ ಅಧ್ಯಕ್ಷರು ಹಾಗೂ ಪುರಸಭೆಯ ಮಾಜಿ ಸದಸ್ಯರು ಸೇರಿದಂತೆ ಪ್ರಮುಖರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ದೇವಾಲಯ ಸಂಪರ್ಕ ರಸ್ತೆ ಮತ್ತು ಸುತ್ತಮುತ್ತ ತೆರೆದಿದ್ದ ಸಿಹಿ ತಿಂಡಿ ಹಾಗೂ ಆಟೋಪಕರಣಗಳ ಅಂಗಡಿಗಳು ಜನರ ಗಮನಸೆಳೆದವಲ್ಲದೆ ದೇವಾಲಯದ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕುರುಕ್ಷೇತ್ರ ನಾಟಕ ಕಲಾ ರಸಿಕರನ್ನ ಮನರಂಜಿಸಿತು.
ದೇವಾಲಯ ಟ್ರಸ್ಟ್ ಅಧ್ಯಕ್ಷ ಚೌಕಹಳ್ಳಿರಾಜಣ್ಣ, ಗೌರವಾಧ್ಯಕ್ಷ ಅಣ್ಣಯ್ಯನಾಯಕ, ಕಾರ್ಯದರ್ಶಿ ಕೆ.ಪಿ.ಜಗದೀಶ್, ಖಜಾಂಚಿ ಪರಶಿವಮೂರ್ತಿ, ಪದಾಧಿಕಾರಿಗಳಾದ ಕಾಳೇನಹಳ್ಳಿಮಹದೇವ್, ಮೋಟೇಗೌಡ, ಜವರೇಗೌಡ, ಚನ್ನಕೇಶವ, ಯಜಮಾನ್ ಮಹದೇವ್, ಚನ್ನಬಸಪ್ಪ, ಟಿ.ಪಿ.ನಂಜುಂಡ, ಲಾಲನಹಳ್ಳಿಯೋಗೀಶ್, ಸೇರಿದಂತೆ ಇತರ ಪದಾಧಿಕಾರಿಗಳು ಹಾಜರಿದ್ದರು.



