ವರದಿ :ಸ್ಟೀಫನ್ ಜೇಮ್ಸ್.
ಬೆಳಗಾವಿ: ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ವಿಶೇಷವಾಗಿ ರಚಿಸಿರುವ “ಅಕ್ಕ ಪಡೆ”ಗೆ ನಗರ ಚನ್ನಮ್ಮ ವೃತ್ತದಲ್ಲಿ ಮಂಗಳವಾರ ಫೆ.17) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು”ಅಕ್ಕ ಪಡೆ” 24/7 ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ. ತರಬೇತಿ ಪಡೆದ ಮಹಿಳಾ ಸಿಬ್ಬಂದಿ ಅಕ್ಕ ಪಡೆಯಲ್ಲಿ ಆಯ್ಕೆಯಾಗಿದ್ದು, ಶಾಲಾ-ಕಾಲೇಜು, ಮಾಲ್ಗಳು, ದೇವಸ್ಥಾನ, ಬಸ್ ಮತ್ತು ರೈಲ್ವೆ ನಿಲ್ದಾಣಗಳಂತಹ ಜನದಟ್ಟಣೆ ಪ್ರದೇಶಗಳಲ್ಲಿ ಅಕ್ಕ ಪಡೆ ಗಸ್ತು ತಿರುಗಲಿದೆ ಎಂದು ಮಾಹಿತಿ ನೀಡಿದರು.
ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ಸಹಾಯ ಮಾಡಲು ಅಕ್ಕಪಡೆ ರಚಿಸಲಾಗಿದ್ದು, ಪೊಲೀಸ್ ಗಸ್ತು ವಾಹನಗಳ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ.ಕಿರುಕುಳ ತಡೆಗಟ್ಟಲು ಮತ್ತು ಮಹಿಳೆಯರು/ಮಕ್ಕಳಿಗೆ ಸುರಕ್ಷಿತ ವಾತಾವರಣ ಒದಗಿಸುವುದು. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಅಥವಾ ಮಕ್ಕಳಿಗೆ ಕಿರುಕುಳ, ದೌರ್ಜನ್ಯ ಅಥವಾ ಅಪಾಯ ಎದುರಾದಾಗ ‘ಅಕ್ಕ ಪಡೆ’ ತಕ್ಷಣವೇ ಸ್ಥಳಕ್ಕೆ ಧಾವಿಸಿ ರಕ್ಷಣೆ ನೀಡಲು ಸಹಾಯವಾಗಲಿದೆ.
ಸಂಕಷ್ಟದಲ್ಲಿರುವ ಮಹಿಳೆಯರಿಗೆ ರಕ್ಷಣೆ ನೀಡುವುದು ಅಕ್ಕ ಪಡೆಯ ಮೂಲ ಉದ್ದೇಶವಾಗಿದೆ ಮಹಿಳೆಯರು ಆರ್ಥಿಕ, ಸಾಮಾಜಿಕವಾಗಿ ಸದೃಢರಾಗಲು ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ ಅದರಂತೆ ಅಕ್ಕ ಪಡೆಯು ಕೂಡ ಮಹಿಳೆಯರ ಸುರಕ್ಷೆಗಾಗಿ ಸದಾ ಕಾಲ ಕಾರ್ಯನಿರ್ವಹಿಸುತ್ತೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದರು.
“ಅಕ್ಕ ಪಡೆ” ಅಣಕು ಪ್ರದರ್ಶನ: ಇದಕ್ಕೂ ಮುಂಚೆ “ಅಕ್ಕ ಪಡೆ”ಯ ಗಸ್ತು ವಾಹನಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಬಳಿಕ “ಅಕ್ಕ ಪಡೆ”ಯ ಸಿಬ್ಬಂದಿಗಳು ವಿವಿಧ ರಕ್ಷಣಾತ್ಮಕ ಅಣುಕುಗಳನ್ನು ಪ್ರದರ್ಶಿಸಿದರು.
ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ್ ಬೊರಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಾಹಕಾಧಿಕಾರಿ ರಾಹುಲ್ ಶಿಂಧೆ, ಅಕ್ಕ ಪಡೆ ರಾಜ್ಯ ರಾಜ್ಯ ಸಂಯೋಜಕರಾದ ಶೈನಿ, ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚೇತನಕುಮಾರ, ಡಿಡಿಪಿಐ ಲೀಲಾವತಿ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ ಉಪಸ್ಥಿತರಿದ್ದರು



