ಮಂಡ್ಯ : ರಾಜ್ಯಕ್ಕೆ ಅನ್ಯಾಯ ಆದ್ರೂ ಪರವಾಗಿಲ್ಲ ಜೆಡಿಎಸ್ಗೆ ಬಿಜೆಪಿಯ ಮಿತ್ರತ್ವ ಅಷ್ಟೇ ಸಾಕು, ಕೆಲವರು 2028ಕ್ಕೆ ಕೋಟ್, ಸೂಟ್ ಹೋಲಿಸ್ಕೊಂಡು ರೆಡಿ ಆಗ್ತಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಮಂಡ್ಯದಲ್ಲಿ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಎರಡೂ ಪಕ್ಷದ ಮಧ್ಯೆ ತಿಕ್ಕಾಟ ಪ್ರಾರಂಭವಾಗಿದೆ ಎಂದಿದ್ದಾರೆ. ಇನ್ನು ಯಶಸ್ವಿಯಾಗಿ ಗ್ಯಾರಂಟಿ ಯೋಜನೆ ಕೊಡ್ತಿದ್ದೇವೆ. ಅಭಿವೃದ್ಧಿ ಕೆಲಸ ನಿರಂತರವಾಗಿ ಮಾಡ್ತಿದ್ದೇವೆ. ಸಿಎಂ ಸಿದ್ದರಾಮಯ್ಯ ಒಳ್ಳೆಯ ಬಜೆಟ್ ಕೊಡ್ತಾರೆ ಎಂಬ ಭರವಸೆ ಇದೆ ಎಂದಿದ್ದಾರೆ.
ಇದೇ ವೇಳೆ ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಮಾನ್ಯತೆ ಕೊಟ್ಟಿಲ್ಲ ಎಂದ ಅವರು, 19 ಬಿಜೆಪಿ ಎಂಪಿ, 5 ಜನ ಕೇಂದ್ರ ಮಂತ್ರಿ ಇದ್ದರೂ ರಾಜ್ಯಕ್ಕೆ ಏನಾದರೂ ಕೊಡುಗೆ ಇದ್ಯಾ? ಅಂತ ಪ್ರಶ್ನಿಸಿದರಲ್ಲದೆ, ಈ ಹಿಂದೆ ಜೆಡಿಎಸ್ನವರು ಬಿಜೆಪಿಯನ್ನ ಹೆಚ್ಚು ಟೀಕೆ ಮಾಡ್ತಿದ್ರು. ಆದರೆ ಇವಾಗ ಜೆಡಿಎಸ್ನ ಎಲ್ಲರೂ ಸೈಲೆಂಟ್ ಇದ್ದಾರೆ. ಜೆಡಿಎಸ್ಗೆ ಅಧಿಕಾರವೇ ಮುಖ್ಯವಾಗಿದೆ ಅಂತ ಆರೋಪಿಸಿದರು.
ರಾಜ್ಯಕ್ಕೆ ಅನ್ಯಾಯ ಆದರೂ ಪರವಾಗಿಲ್ಲ, ಜೆಡಿಎಸ್ಗೆ ಬಿಜೆಪಿಯ ಮಿತ್ರತ್ವ ಸಾಕು ಅಂತ ವ್ಯಂಗ್ಯವಾಡಿದ ಅವರು, ಮೇಕೆದಾಟು ಯೋಜನೆಗೆ ಸುಪ್ರೀಂ ಕೋರ್ಟ್ ಅನುಮತಿ ಕೊಟ್ಟರೂ ಸದ್ದಿಲ್ಲ. ಕೇಂದ್ರ ಸಚಿವರು 5 ನಿಮಿಷಕ್ಕೆ ಮೇಕೆದಾಟು ಮಾಡ್ತಿನಿ ಅಂದ್ರೂ ಮಾಡಿಲ್ಲ. ಸಾರ್ವಜನಿಕರು ಹಲವಾರು ಕಾರಣಕ್ಕೆ ಅಭಿವೃದ್ಧಿ ಕೊಟ್ಟರೂ ಬೇರೆ ಕಾರಣಕ್ಕೆ ಆಲೋಚನೆ ಮಾಡ್ತಾರೆ ಎಂದು ಹೇಳಿದ್ದಾರೆ.
ಇನ್ನೂ ಎರಡೂ ವರ್ಷ ಇದೆ ಅನ್ನೋದನ್ನು ಮರೆತು ಕೆಲವರು 2028ಕ್ಕೆ ಕೋಟ್, ಸೂಟ್ ಹೋಲಿಸಿಕೊಂಡು ರೆಡಿ ಇದ್ದಾರೆ. ಸೂಟ್, ಕೋಟ್ ರೆಡಿ ಮಾಡ್ಕೊಂಡು ಅವರವರೇ ಖಾತೆ ಹಂಚಿಕೊಳ್ಳುತ್ತಿದ್ದಾರೆ ಅಂತ ವ್ಯಂಗ್ಯವಾಡಿದ್ದರು.
2028ಕ್ಕೆ ಯಾವ ಸರ್ಕಾರ ಬರಬೇಕು ಅಂತ ಜನ ತೀರ್ಮಾನ ಮಾಡುತ್ತಾರೆ. ಕೆಲವರು ಮಗು ಹುಟ್ಟೋಕೂ ಮುಂಚೆ ಕುಲಾವಿ ಮಾಡ್ತಿದ್ದಾರೆ ಹಂಗೆ ಎರಡೂ ಪಕ್ಷದ ಮಧ್ಯೆ ತಿಕ್ಕಾಟ ಪ್ರಾರಂಭವಾಗಿದೆ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.
ಸರ್ಕಾರ ಟೇಕ್ ಆಫ್ ಆಗಿದೆ, ಇಲ್ಲ ಅನ್ನೋದನ್ನ ಯಾವ ರೀತಿ ಮಾನದಂಡದಲ್ಲಿ ಅಳೆಯೋದು? ಕಳೆದ ಐದು ವರ್ಷದಲ್ಲಿ ಮೂರು ಮುಖ್ಯಮಂತ್ರಿ ಕಾಲದಲ್ಲಿ ಏನು ಅಭಿವೃದ್ಧಿ ಆಗಿದೆ? ಎಲ್ಲವನ್ನೂ ಪಟ್ಟಿ ಮಾಡಿ ನೋಡಿ. ಇವಾಗ ಏನು ಅಭಿವೃದ್ಧಿ ಆಗಿದೆ ಟ್ಯಾಲಿ ಮಾಡಿ. ಅವಾಗ ನಾವು ಒಪ್ಪಿಕೊಳ್ತೇವೆ ಅಂತ ಸವಾಲು ಹಾಕಿದ್ದಾರೆ.



