ನವದೆಹಲಿ : ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡರ್ ಕೊಲೆ ಪ್ರಕರಣದಲ್ಲಿ ಕೊನೆಗೂ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಪ್ರಕರಣದ ಪ್ರಮುಖ ಆರೋಪಿಯೂ ಆಗಿರುವ ಶಾಸಕರಿಗೆ ಸುಪ್ರೀಂ ಕೋರ್ಟ್ನ ನ್ಯಾ. ಸಂಜಯ್ ಕರೋಲ್ ನೇತೃತ್ವದ ದ್ವಿಸದಸ್ಯ ಪೀಠ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ವಿನಯ್ ಕುಲಕರ್ಣಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದಾರ್ಥ್ ಲೂಥ್ರಾ, ಸಾಕ್ಷ್ಯಗಳ ವಿಚಾರಣೆ ಮುಕ್ತಾಯಗೊಂಡಿದೆ. ಈ ಹಂತದಲ್ಲಿ ಸಾಕ್ಷ್ಯ ನಾಶವಾಗಲಿ ಅಥವಾ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ. ಪ್ರಕರಣ ಇತರೆ ಆರೋಪಿಗಳಿಗೆ ಈಗಾಗಲೇ ಜಾಮೀನು ನೀಡಲಾಗಿದೆ. ವಿನಯ್ ಕುಲಕರ್ಣಿ ಅವರಿಗೆ ಜಾಮೀನು ನೀಡಿದ್ರೆ ಸಮಸ್ಯೆ ಇಲ್ಲ ಎಂದು ವಾದ ಮಂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಸಂಜಯ್ ಕರೋಲ್, ವಿನಯ್ ಕುಲಕರ್ಣಿ ಪ್ರಕರಣ ಪ್ರಮುಖ ಆರೋಪಿ, ಆದಾಗ್ಯೂ ಸಾಕ್ಷ್ಯಗಳ ವಿಚಾರಣೆ ಮುಕ್ತಾಯವಾಗಿರುವ ಹಿನ್ನೆಲೆ ಜಾಮೀನು ನೀಡಬಹುದು ಎಂದು ಹೇಳಿದ್ರು.
ವಾದ ಪ್ರತಿವಾದಗಳನ್ನ ಆಲಿಸಿದ ಬಳಿಕ ಕೋರ್ಟ್ ಜಾಮೀನು ಮಂಜೂರಿಗೆ ಆದೇಶಿಸಿತು. ಅಲ್ಲದೇ ಇನ್ನೆರಡು ತಿಂಗಳಲ್ಲಿ ವಿಚಾರಣೆ ಆರಂಭಿಸಲು ವಿಚಾರಣಾ ನ್ಯಾಯಲಯಕ್ಕೆ ನಿರ್ದೇಶನ ನೀಡಿತು. ಇದಕ್ಕೆ ಸಿಬಿಐ ವಕೀಲರಿಂದ ಆಕ್ಷೇಪ ವ್ಯಕ್ತವಾಯಿತು, ಮತ್ತೊಂದು ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಭಾಗಿಯಾಗಿದ್ದಾರೆ ಹೀಗಾಗಿ ಜಾಮೀನು ನೀಡಬಾರದು ಎಂದು ವಾದಿಸಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಪೀಠ, ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಪ್ರಕರಣ ಪ್ರಮುಖ ಆರೋಪಿ ಅದಾಗ್ಯೂ ಸಾಕ್ಷ್ಯಗಳ ವಿಚಾರಣೆ ಮುಕ್ತಾಯವಾಗಿರುವ ಹಿನ್ನಲೆ ಜಾಮೀನು ನೀಡಬಹುದು ಎಂದು ಹೇಳಿತು. ಇದರ ಬೆನ್ನಲ್ಲೇ ಜಾಮೀನು ಮಂಜೂರು ಮಾಡಿದ ಪೀಠ ಎರಡು ತಿಂಗಳಲ್ಲಿ ವಿಚಾರಣೆ ಆರಂಭಿಸಲು ವಿಚಾರಣಾ ನ್ಯಾಯಲಯಕ್ಕೆ ನಿರ್ದೇಶನ ನೀಡಿತು.
ಸದ್ಯ ಪ್ರಕರಣ ಮುಕ್ತಾಯ ಹಂತದಲ್ಲಿದ್ದು, ಆರೋಪಿಗಳ ಹೇಳಿಕೆ ದಾಖಲಾಗುತ್ತಿದೆ. ವಕೀಲರ ಕೊನೆಯ ಹಂತದ ವಾದ ಇನ್ನೂ ಬಾಕಿಯಿದೆ.
ಯೋಗೀಶ್ಗೌಡರ್ ಅವರನ್ನ 2016 ರ ಜೂನ್ 15 ರಂದು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಪ್ರಕರಣದ ತನಿಖೆಯನ್ನು ಸ್ಥಳೀಯ ಪೊಲೀಸರ ಬಳಿಕ ಸಿಬಿಐ ಕೈಗೆತ್ತಿಕೊಂಡು ಶಾಸಕ ವಿನಯ್ ಕುಲಕರ್ಣಿ ಅವರನ್ನು ಆರೋಪಿಯನ್ನಾಗಿ ಪರಿಗಣಿಸಿ ಬಂಧಿಸಿತ್ತು. ಸುಪ್ರೀಂ ಕೋರ್ಟ್ ಈ ಹಿಂದೆ ಜಾಮೀನು ರದ್ದುಪಡಿಸಿದ ಬಳಿಕ 2025ರ ಜೂನ್ 13 ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದರು. ಇದೀಗ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಬಿಡುಗಡೆಯ ಭಾಗ್ಯ ಸಿಕ್ಕಂತಾಗಿದೆ.



