ಬೆಂಗಳೂರು : ಪಶ್ಚಿಮ ಏಷ್ಯಾ ಹಾಗೂ ಮಧ್ಯ ಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುವಂತೆ ಹಾಗೂ ಇದಕ್ಕಾಗಿ ಅಗತ್ಯ ವಿಮಾನಯಾನ ಸೌಲಭ್ಯ ಕಲ್ಪಿಸುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು, ಈ ಸಂಬಂಧ ವಿದೇಶಾಂಗ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಪತ್ರ ಬರೆದಿದ್ದಾರೆ.
ಇನ್ನೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾವ್ಯದರ್ಶಿ ವಿಕ್ರಂ ಮಿಸ್ತಿ ಅವರಿಗೆ ಪತ್ರ ಬರೆದಿರುವ ಅವರು, ಮಧ್ಯಪ್ರಾಚ್ಯ ದೇಶಗಳಲ್ಲಿ ಸೃಷ್ಟಿಯಾಗಿರುವ ಭೌಗೋಳಿಕ ರಾಜಕೀಯ ಬೆಳವಣಿಗೆ, ಸೇನಾ ಚಟುವಟಿಕೆಗಳಿಂದ ಕನ್ನಡಿಗರು ಸೇರಿ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಲ್ಲದೆ ನಾಗರಿಕರ ಸಂಚಾರ ಮೊಟಕು, ವಾಯುಗಡಿ ನಿರ್ಬಂಧದಿಂದ ಅಲ್ಲಿನ ಭಾರತೀಯರಲ್ಲಿ ಆತಂಕ ಸೃಷ್ಟಿಯಾಗಿದ್ದು, ಯುದ್ಧ ಪರಿಸ್ಥಿತಿ ಪರಿಣಾಮವು ದುಬೈ ಸೇರಿ ಪಶ್ಚಿಮ ಏಷ್ಯಾದ ದೇಶಗಳ ಮೇಲೂ ಬಿದ್ದಿದೆ. ಉದ್ಯೋಗ, ಉನ್ನತ ಶಿಕ್ಷಣ, ವ್ಯವಹಾರ, ಪ್ರವಾಸ ಹಾಗೂ ಅಧಿಕೃತ ಕಾರ್ಯಕ್ರಮಗಳ ನಿಮಿತ್ತ ಹೋಗಿರುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೀಗಾಗಿ ಕೇಂದ್ರ ಸರ್ಕಾರ ಭಾರತೀಯ ರಾಯಭಾರಿ, ಕಾನ್ಸುಲೇಟ್ ಮೂಲಕ ಕನ್ನಡಿಗರಿಗೆ ಸುರಕ್ಷತೆ ಖಚಿತಪಡಿಸಿ ಆರೈಕೆ ಮಾಡಬೇಕು, ಕರ್ನಾಟಕ ಹಾಗೂ ಭಾರತದ ವಿವಿಧ ರಾಜ್ಯಗಳ ಜನರನ್ನು ಆದ್ಯತೆ ಮೇರೆಗೆ ತಾಯ್ನಾಡಿಗೆ ಮರಳಲು ವ್ಯವಸ್ಥೆ ಮಾಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಸಮಿರ್ ಕುಮಾರ್ ಸಿನ್ಹಾ ಅವರಿಗೂ ಪತ್ರ ಬರೆದಿರುವ ಶಾಲಿನಿ ರಜನೀಶ್ ಅವರು, ಯುದ್ಧದ ಸ್ಥಿತಿಯಲ್ಲಿರುವ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರು ರಿಟರ್ನ್ ಟಿಕೆಟ್ ಬುಕ್ ಮಾಡಿದರೂ ವಿಮಾನಗಳ ಸೇವೆಯಲ್ಲಿ ಅಡಚಣೆ ಉಂಟಾಗಿದ್ದು, ಮಾ.2ರವರೆಗೆ ಎಲ್ಲಾ ವಿಮಾನಸೇವೆ ಬಂದ್ ಮಾಡಲಾಗಿದೆ. ಹೀಗಾಗಿ ಉಂಟಾಗಿರುವ ಅನಿಶ್ಚಿತತೆಯಿಂದ ಅವರು ವಾಪಸ್ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿಮಾನಗಳ ಕಾರ್ಯಾಚರಣೆ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಕನ್ನಡಿಗರು ಸೇರಿದಂತೆ ದೇಶದ ಸುರಕ್ಷಿತವಾಗಿ ವಾಪಸು ಕಳುಹಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳ ಜತೆ ಸಮನ್ವಯ ಸಾಧಿಸಿ ಅಂತಹ ಕನ್ನಡಿಗರು ಹಾಗೂ ಭಾರತೀಯರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು. ಬಳಿಕ ವಿಮಾನ ವ್ಯವಸ್ಥೆ ಮಾಡಿ ಟಿಕೆಟ್ಗಳನ್ನು ಮರು ಹೊಂದಾಣಿಕೆ ಮಾಡಬೇಕು. ಹೆಚ್ಚುವರಿ ದರ ವಸೂಲಿ ಮಾಡದಂತೆ ನೋಡಿಕೊಳ್ಳಬೇಕು ಎಂದು ಕೋರಿದ್ದಾರೆ.



