ಬೆಂಗಳೂರು: ಅಬಕಾರಿ ಇಲಾಖೆಯ ಉತ್ತಮ ಆದಾಯ ಸಂಗ್ರಹಣೆಯಿಂದ ಉತ್ಸಾಹಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026–27ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಅಬಕಾರಿ ಆದಾಯ ಗುರಿಯನ್ನು ರೂ.40,000 ಕೋಟಿಯಿಂದ ಸುಮಾರು ರೂ.45,000 ಕೋಟಿಗೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಆರ್ಥಿಕ ವರ್ಷದ ರೂ.40,000 ಕೋಟಿ ಆದಾಯ ಗುರಿಯನ್ನು ಇಲಾಖೆ ಮೀರಿಸುವ ನಿರೀಕ್ಷೆಯಿದ್ದು, ಮಾ.2ರ ವೇಳೆಗೆ ಅಬಕಾರಿ ಇಲಾಖೆ ರೂ.36,500 ಕೋಟಿ ಸಂಗ್ರಹಿಸಿದ್ದು, ಮಾ.31ರೊಳಗೆ ಇನ್ನೂ ರೂ.4,000 ರಿಂದ ರೂ.5,000 ಕೋಟಿ ಸಂಗ್ರಹವಾಗುವ ಸಾಧ್ಯತೆ ಇದೆ.
ಇದರಿಂದ ಒಟ್ಟು ಆದಾಯ ರೂ.41,000 ಕೋಟಿಗೂ ಅಧಿಕವಾಗಬಹುದು ಎಂದು ಅಂದಾಜಿಸಲಾಗಿದ್ದು, ಆದಾಯ ಗುರಿ ಹೆಚ್ಚಳ ಎಂದರೆ ರಾಜ್ಯದಲ್ಲಿ ಮದ್ಯಪಾನ ಪ್ರಮಾಣ ಹೆಚ್ಚಾಗಿದೆ ಎಂಬುದಲ್ಲ. ಕಳೆದ ಎರಡು ವರ್ಷಗಳಲ್ಲಿ ಮದ್ಯಪಾನದ ಪ್ರಮಾಣದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರತೀಯ ಉತ್ಪಾದಿತ ಮದ್ಯ (ಐಎಂಎಲ್)ದ ಮೊದಲ ನಾಲ್ಕು ಸ್ಲ್ಯಾಬ್ಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕವನ್ನು ರೂ.15ರಷ್ಟು ಹೆಚ್ಚಿಸಿದ್ದರು. ಕಡಿಮೆ ಬೆಲೆಯ ಈ ನಾಲ್ಕು ಸ್ಲ್ಯಾಬ್ಗಳೇ ರಾಜ್ಯದ ಒಟ್ಟು ಅಬಕಾರಿ ಆದಾಯದ ಶೇ.80ರಿಂದ 85ರವರೆಗೆ ಕೊಡುಗೆ ನೀಡುತ್ತಿವೆ. ಮದ್ಯ ಹಾಗೂ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಳದಿಂದ ಮದ್ಯಪಾನದ ಪ್ರಮಾಣದ ಮೇಲೆ ಕೆಲವು ಪರಿಣಾಮ ಕಂಡಿದ್ದರೂ, ರಾಜ್ಯದ ಆದಾಯದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ಮಾನವ ಉಪಯೋಗದ ಮದ್ಯಪಾನ ಜಿಎಸ್ಟಿ ವ್ಯಾಪ್ತಿಗೆ ಒಳಪಡುವುದಿಲ್ಲ. ಇದರಿಂದ ಅಬಕಾರಿ ಸುಂಕ ಹಾಗೂ ವ್ಯಾಟ್ ವಿಧಿಸುವ ಅಧಿಕಾರ ರಾಜ್ಯ ಸರ್ಕಾರಗಳ ಬಳಿಯೇ ಉಳಿದಿದ್ದು, ರಾಜ್ಯಗಳ ಹಣಕಾಸು ಸ್ವಾಯತ್ತತೆಗೆ ಸಹಾಯವಾಗುತ್ತಿದೆ. 2016ರಲ್ಲಿ ಅಬಕಾರಿ ಆದಾಯ ಗುರಿ ರೂ.16,500 ಕೋಟಿ ಮಾತ್ರವಾಗಿತ್ತು. ಈಗ 2026–27ರಲ್ಲಿ ಅದನ್ನು ರೂ.45,000 ಕೋಟಿಗೆ ಹೆಚ್ಚಿಸುವ ಕುರಿತು ಚರ್ಚೆ ನಡೆಯುತ್ತಿದ್ದು, ಇದು 2016ರಿಗಿಂತ ಸುಮಾರು ಶೇ.150ರಷ್ಟು ಏರಿಕೆಯಾಗುವ ಸಾಧ್ಯತೆಯನ್ನು ಸೂಚಿಸುತ್ತದೆ.



