ಮೈಸೂರು: ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಸಿದ್ಧತೆಗಳು ವೇಗ ಪಡೆದುಕೊಂಡಿವೆ. ಈ ವರ್ಷದ ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅರಣ್ಯ ಇಲಾಖೆ ಹೊಸ ಕ್ರಮಗಳನ್ನು ಜಾರಿಗೆ ತಂದಿದೆ. ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಗಜಪಡೆಯ ಹೃದಯದ ಆರೋಗ್ಯ ಪರಿಶೀಲನೆಗಾಗಿ ವಿಶೇಷ ಇಸಿಜಿ ಪರೀಕ್ಷೆ ನಡೆಸಲಾಗಿದೆ
ದಸರಾ ಸಂದರ್ಭದಲ್ಲಿ ಆನೆಗಳು ಸಾವಿರಾರು ಜನರ ನಡುವೆ, ವಾಹನಗಳ ಗದ್ದಲ ಹಾಗೂ ಬಿಸಿಲಿನ ವಾತಾವರಣದಲ್ಲಿ ತಾಲೀಮು ಮತ್ತು ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅವುಗಳ ಹೃದಯ ಬಡಿತ ಹಾಗೂ ದೈಹಿಕ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ಇಸಿಜಿ ಪರೀಕ್ಷೆ ಅಗತ್ಯವಾಗಿದೆ ಎಂದು ಡಿಸಿಎಫ್ ಡಾ. ಐ. ಬಿ. ಪ್ರಭುಗೌಡ ತಿಳಿಸಿದ್ದಾರೆ.
ಈ ಉದ್ದೇಶಕ್ಕಾಗಿ ಅರಣ್ಯ ಇಲಾಖೆ ವಿಶೇಷ ಇಸಿಜಿ ಯಂತ್ರವನ್ನು ಖರೀದಿಸಿದ್ದು, ಮತ್ತಿಗೋಡು, ಭೀಮನಕಟ್ಟೆ, ದುಬಾರೆ ಹಾಗೂ ರಾಮಪುರ ಆನೆ ಶಿಬಿರಗಳಲ್ಲಿರುವ 20ಕ್ಕೂ ಹೆಚ್ಚು ಆನೆಗಳಿಗೆ ಈಗಾಗಲೇ ಇಸಿಜಿ ಪರೀಕ್ಷೆ ನಡೆಸಲಾಗಿದೆ.
ಗರ್ಭಧಾರಣೆ ಪರೀಕ್ಷೆಗೂ ಆದ್ಯತೆ
ಹಿಂದಿನ ವರ್ಷಗಳಲ್ಲಿ ಎದುರಾದ ಕೆಲವು ಅನುಭವಗಳನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿ ಅರಣ್ಯ ಇಲಾಖೆ ಹೆಚ್ಚುವರಿ ಮುನ್ನೆಚ್ಚರಿಕೆ ವಹಿಸಿದೆ. ಅರಮನೆ ಆವರಣಕ್ಕೆ ಬಂದ ನಂತರ ಹೆಣ್ಣಾನೆ ಗರ್ಭಿಣಿಯಾಗಿರುವುದು ಗೊತ್ತಾಗುವಂತಹ ಪರಿಸ್ಥಿತಿ ಮರುಕಳಿಸದಂತೆ, ಶಿಬಿರಗಳಲ್ಲಿರುವ 8 ರಿಂದ 10 ಹೆಣ್ಣಾನೆಗಳಿಗೆ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮೂಲಕ ಗರ್ಭಧಾರಣೆ ಪರೀಕ್ಷೆಯನ್ನೂ ನಡೆಸಲಾಗುತ್ತಿದೆ.



