ಬೆಂಗಳೂರು: ತಂತ್ರಜ್ಞಾನದ ದುರುಪಯೋಗದಿಂದಾಗಿಯೇ ಮತ್ತೊಂದು ದುರಂತ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ವೃತ್ತಿಯಿಂದ ನಿವೃತ್ತರಾದ ವೃದ್ಧ ದಂಪತಿಯನ್ನು “ಡಿಜಿಟಲ್ ಅರೆಸ್ಟ್” ಹೆಸರಿನಲ್ಲಿ ಬೆದರಿಸಿ ₹4.79 ಕೋಟಿ ರೂ. ಹಣವನ್ನು ಸುಲಿಗೆ ಮಾಡಿದ ಇಬ್ಬರು ಸೈಬರ್ ಅಪರಾಧಿಗಳನ್ನು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಾಗಿರುವವರು ನಾರಾಯಣ ಸಿಂಗ್ ಚೌಧರಿ ಮತ್ತು ಈಶ್ವರ್ ಸಿಂಗ್ ಎಂಬವರು. ಇವರನ್ನು ಸೈಬರ್ ಕ್ರೈಂ ಪೊಲೀಸ್ ತಂಡವು ಶೋಧಿಸಿ ಬಂಧಿಸಿದೆ. ಇವರ ವಿರುದ್ಧ ವಂಚನೆಗೊಳಗಾದ ಮಂಜುನಾಥ್ ಎಂಬುವರು ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು. ಸೈಬರ್ ವಂಚಕರು ದಂಪತಿಯನ್ನು ಬೆದರಿಸಿ, ಹಂತ ಹಂತವಾಗಿ ರೂ.4.79 ಕೋಟಿ ಸುಲಿಗೆ ಮಾಡಿದ್ದರು. ಜತೆಗೆ ಇವರ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಬಲವಂತವಾಗಿ ಪಡೆದುಕೊಂಡಿದ್ದರು. ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ವೃದ್ಧ ದಂಪತಿ ಸೈಬರ್ ಠಾಣೆಗೆ ದೂರು ನೀಡಿದ್ದರು ಎಂದು ಸೈಬರ್ ಪೊಲೀಸರು ತಿಳಿಸಿದ್ದಾರೆ.
ವೃತ್ತಿಯಿಂದ ಎಂಜಿನಿಯರ್ ಆಗಿದ್ದ ಮಂಜುನಾಥ್ ಅವರು ನೈಜೀರಿಯಾದಲ್ಲಿ 31 ವರ್ಷ ಕೆಲಸ ಮಾಡಿದ್ದ ನಿವೃತ್ತಿ ಹೊಂದಿದ್ದರು. ನಂತರ ಬೆಂಗಳೂರಿನಲ್ಲಿ ನೆಲಸಿದ್ದರು. ವಿವಿಧ ಬ್ಯಾಂಕ್ಗಳಲ್ಲಿ ಖಾತೆ ಹೊಂದಿದ್ದು ಹಣವನ್ನು ಇಟ್ಟಿದ್ದರು.
ಮಾರ್ಚ್ ಮೊದಲ ವಾರದಲ್ಲಿ ಬ್ಯಾಂಕ್ ಪ್ರತಿನಿಧಿಗಳ ಸೋಗಿನಲ್ಲಿ ಮಂಜುನಾಥ್ ಅವರಿಗೆ ಸೈಬರ್ ವಂಚಕರು ಕರೆ ಮಾಡಿ ತಮ್ಮ ಬ್ಯಾಂಕ್ ಖಾತೆಗಳ ಮೂಲಕ ಅಕ್ರಮವಾಗಿ ಹಣ ವರ್ಗಾವಣೆಯಾಗುತ್ತಿದ್ದು, ಅದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಸಿಬಿಐನಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೆದರಿಸಿದ್ದರು. ನಕಲಿ ಬಂಧನದ ವಾರಂಟ್ ಪ್ರತಿಯನ್ನು ಮಂಜುನಾಥ್ ಅವರ ವಾಟ್ಸಾಪ್ ಗೆ ಕಳುಹಿಸಿ, ತಮ್ಮನ್ನು ಬಂಧಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಬಂಧಿಸಬಾರದು ಎಂದಾದರೆ ಹಣ ನೀಡುವಂತೆ ಕೇಳಿದ್ದರು. ಇವರ ಬೆದರಿಕೆಯಿಂದ ಆತಂಕಗೊಂಡಿದ್ದ ದಂಪತಿ, ಹಂತ ಹಂತವಾಗಿ ಸೈಬರ್ ವಂಚಕರಿಗೆ ರೂ.4.79 ಕೋಟಿ ಹಣ ನೀಡಿದ್ದರು. ಮತ್ತಷ್ಟು ಹಣ ನೀಡುವಂತೆ ಪೀಡಿಸಿದಾಗ ವೃದ್ಧ ದಂಪತಿ ಆಗ್ನೆಯ ವಿಭಾಗದ ಸೈಬರ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ತಿಳಿದು ಬಂದಿದೆ.