ಚಾಮರಾಜನಗರ: ದಸರಾ ಹಬ್ಬದ ಸಂದರ್ಭದಲ್ಲಿ ಗೊಂಬೆ ಇಡುವ ಪದ್ಧತಿ ರೂಡಿಯಲ್ಲಿದ್ದು ಇದೊಂದು ಪುರಾತನ ಆಧ್ಯಾತ್ಮಿಕ ಮತ್ತು ಶ್ರೇಷ್ಠತ್ವದ ಪದ್ಧತಿಯಾಗಿದೆ. ಗೊಂಬೆ ಇಡುವ ಮನೆಗಳು ಸದಾಕಾಲ ಸಮೃದ್ಧವಾಗಿ, ಭಾವೈಕ್ಯತೆ, ಶಾಂತಿ, ನೆಮ್ಮದಿ ,ಐಶ್ವರ್ಯಗಳು ವೃದ್ಧಿಸುತ್ತವೆ ಎಂದು ಸಂಸ್ಕೃತಿ ಚಿಂತಕ, ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂಥ್ ಕ್ಲಬ್ ಹಮ್ಮಿಕೊಂಡಿರುವ ಚಾಮರಾಜನಗರದಲ್ಲಿ ಗೊಂಬೆ ಮನೆಯಲ್ಲಿ ಪ್ರಸಿದ್ಧಿಯಾಗಿ ಹಲವು ದಶಕಗಳ ಕಾಲ ನಿರಂತರವಾಗಿ ಗೊಂಬೆ ಕೂರಿಸಿ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸಿದ ಶ್ರೀಮತಿ ಲೀಲಾವತಮ್ಮ ಮತ್ತು ಟೀಕೆ ನಂಜುಂಡಯ್ಯನವರ ನೆನಪಿನ ಪ್ರಶಸ್ತಿಯನ್ನು ವಿತರಿಸಿ ಮಾತನಾಡುತ್ತ ಆಧುನಿಕ ಕಾಲದಲ್ಲೂ ಗೊಂಬೆ ಇಡುವ ಪದ್ಧತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವ ಮನೆಗಳಿಗೆ ಭೇಟಿ ನೀಡಿ ಅವರನ್ನು ಪ್ರೋತ್ಸಾಹಿಸುವ ದಿಕ್ಕಿನಲ್ಲಿ ಅವರನ್ನು ಗೌರವಿಸುವ ಒಂದು ಪರಂಪರೆಯನ್ನು ಬೆಳೆಸಲಾಗುತ್ತಿದೆ. ವಿಜಯನಗರ ಕಾಲದಲ್ಲಿ ಆರಂಭವಾದ ಮತ್ತು ಪುರಾತನ ಕಾಲದಲ್ಲೂ ಗೊಂಬೆಗಳ ಆರಾಧನೆಯ ಮೂಲಕ ಸೌಂದರ್ಯಪ್ರಜ್ಞೆ, ಆಧ್ಯಾತ್ಮಿಕರಹಸ್ಯ, ಮಾನವ ಶಕ್ತಿಯ ಉನ್ನತಿ, ಚೈತನ್ಯ, ಪ್ರೀತಿ, ಕರುಣೆ, ವಿಶ್ವಾಸ, ಸಹಕಾರ, ಅಲಂಕಾರ ಹಾಗೂ ಕೌಶಲ್ಯಗಳ ಬೆಳವಣಿಗೆಗೆ ಸಹಾಯವಾಗಿದೆ. ಗೊಂಬೆ ಇಡುವ ಮೂಲಕ ಲೌಕಿಕ ಮತ್ತು ಅಲೌಕಿಕ ಆನಂದವನ್ನು ಪಡೆಯಬಹುದು. ಇದರಲ್ಲಿ ಗಣಿತ, ವಿಜ್ಞಾನ, ಕೌಶಲ್ಯ ಕಲೆ, ವಾಸ್ತುಶಿಲ್ಪ, ಅಲಂಕಾರ, ಪ್ರಕೃತಿಯ ರಹಸ್ಯಗಳು ಅಡಕವಾಗಿದೆ. ಹಿರಿಯರು ಮತ್ತು ಕಿರಿಯರಲ್ಲಿ ಅವಿನಾಭಾವ ಸಂಬಂಧ ಬೆಳೆಯುತ್ತದೆ. ಪರಸ್ಪರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಮನಸ್ಥಿತಿ ನಿರ್ಮಾಣವಾಗುತ್ತದೆ. ಗೊಂಬೆ ಪದ್ಧತಿಯನ್ನು ಹೆಚ್ಚು ಹೆಚ್ಚು ಮನೆಗಳಲ್ಲಿ ರೂಡಿಸಿಕೊಳ್ಳಿ ಹತ್ತು ದಿನಗಳ ಕಾಲ ಭಗವಂತನ ವಿಶೇಷವಾಗಿ ದುರ್ಗಾ ಮಾತೆಯ ಶಕ್ತಿ ಮನೆಗಳಲ್ಲಿ ಹೆಚ್ಚಲಿ ಎಂದು ತಿಳಿಸಿದರು.
ಬ್ರಾಹ್ಮಿ ಮಹಿಳಾ ಸಂಘದ ಗೌರವಾಧ್ಯಕ್ಷರಾದ ಶ್ರೀಮತಿ ವತ್ಸಲ ರಾಜಗೋಪಾಲ್ ಮಾತನಾಡಿ ಗೊಂಬೆ ಇಡುವ ಪದ್ಧತಿ ಸಾವಿರಾರು ವರ್ಷಗಳಿಂದ ರೂಢಿಯಲ್ಲಿದೆ. ನವರಾತ್ರಿಯಲ್ಲಿ 10 ದಿನಗಳ ಕಾಲ ಗೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಪರಸ್ಪರ ಎಲ್ಲಾ ನೆರೆಹೊರೆಯ ಜನರನ್ನು ಕರೆದು ,ವಿಶೇಷವಾಗಿ ಮಕ್ಕಳಿಗೆ ಬೊಂಬೆ ತಿಂಡಿಯನ್ನು ನೀಡಿ ಅವರ ಮನಸ್ಸನ್ನು ತೃಪ್ತಿಪಡಿಸಿ, ಸಂತೋಷ ಪಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಚಾಮರಾಜನಗರದ ಟಿ ಕೆ ನಂಜುಂಡಯ್ಯನವರ ಮನೆ ಗೊಂಬೆ ಮನೆಯಾಗಿ ಪ್ರಸಿದ್ಧಿಯಾಗಿತ್ತು. ಅವರ ಹೆಸರಿನಲ್ಲಿ ಜೈ ಹಿಂದ್ ಪ್ರತಿಷ್ಠಾನ ಪ್ರಶಸ್ತಿಯನ್ನು ನೀಡಿ ಸ್ಪೂರ್ತಿ ತುಂಬುತ್ತಿರುವುದು ಮೆಚ್ಚುಗೆಯಾದದ್ದು . ಪುರಾತನ ಕಾಲದ ಗೊಂಬೆಗಳು ಆಧ್ಯಾತ್ಮಿಕ ದೇವರ ಪುರಾಣ ಕಥೆಗಳ, ಯುದ್ಧಗಳು ,ಪಾತ್ರೆಗಳು, ಆಟಿಕೆಗಳು ಮುಂತಾದವು ತುಂಬಾ ಆಕರ್ಷಣೀಯವಾಗಿರುತ್ತದೆ. ಎಂದರು.

ಗೊಂಬೆ ಕೂರಿಸಿರುವ ಶ್ರೀಮತಿ ಗಾಯತ್ರಿ ಸತೀಶ್ ರವರಿಗೆ ಶ್ರೀಮತಿ ಲೀಲಾವತಮ್ಮ ಮತ್ತು ಟಿ ಕೆ ನಂಜುಂಡಯ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಕುಸುಮ ಋಗ್ವೇದಿ, ಸಚಿನ್, ಕಿರಣ್ ಉಪಸ್ಥಿತರಿದ್ದರು.