ವಾರಣಾಸಿ : ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಸಭೆಯಲ್ಲಿ, ಉತ್ತರ ಪ್ರದೇಶದ ವಾರಣಾಸಿಯಲ್ಲಿ ಅತ್ಯಾಧುನಿಕ 6-ಲೇನ್ನ ‘ಗ್ರೀನ್ಫೀಲ್ಡ್ ಎಲಿವೇಟೆಡ್ ಕಾರಿಡಾರ್’ ನಿರ್ಮಾಣಕ್ಕೆ ಮಹತ್ವದ ಒಪ್ಪಿಗೆ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ-19 (NH-19) ಮತ್ತು ವಾರಣಾಸಿ ರಿಂಗ್ ರಸ್ತೆಯನ್ನು ಸಂಪರ್ಕಿಸುವ ಈ ಯೋಜನೆಗೆ 14,447.64 ಕೋಟಿ ರೂಪಾಯಿಗಳ ಬಜೆಟ್ ಮಂಜೂರಾಗಿದೆ.
ಈ ಯೋಜನೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೈಬ್ರಿಡ್ ಆನ್ಯುಯಿಟಿ ಮಾಡೆಲ್ (HAM) ಅಡಿಯಲ್ಲಿ ಜಾರಿಗೊಳಿಸಲಿದೆ.
ಯೋಜನೆಯ ಪ್ರಮುಖ ಅಂಶಗಳು ಹೀಗಿದೆ
ಒಟ್ಟು 46.039 ಕಿಲೋಮೀಟರ್ ಉದ್ದದ 6-ಲೇನ್ ಕಾರಿಡಾರ್, ಗಂಗಾ ನದಿಯ ಮೇಲೆ 910 ಮೀಟರ್ ಉದ್ದದ ಕೇಬಲ್-ಸ್ಟೇಡ್ ಸೇತುವೆ, 1.32 ಕಿ.ಮೀ. ಉದ್ದದ ಎಕ್ಸ್ಟ್ರಾಡೋಸ್ಡ್ ಪಾದಚಾರಿ ಸೇತುವೆ, ಇಳಿಜಾರುಗಳು (Ramps), ಲೂಪ್ಗಳು ಮತ್ತು ಸರ್ವಿಸ್ ರಸ್ತೆಗಳ ನಿರ್ಮಾಣ. ಯೋಜನೆಯಲ್ಲಿ ಟ್ರಾವೆಲೇಟರ್ಗಳು, ರೈಲು ಮೇಲ್ಸೇತುವೆಗಳು, ತುರ್ತು ಪಾರ್ಕಿಂಗ್ ವ್ಯವಸ್ಥೆ, ಧ್ವನಿ ತಡೆಗೋಡೆಗಳು (Sound barriers) ಮತ್ತು ವಾರಾಣಸಿಯ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ವಿಶೇಷ ವಾಸ್ತುಶಿಲ್ಪ ವಿನ್ಯಾಸಗಳನ್ನು ಅಳವಡಿಸಲಾಗುವುದು.
ಜನಸಾಮಾನ್ಯರಿಗೆ ಸಿಗುವ ಲಾಭಗಳು
ಸಮಯ ಉಳಿತಾಯ : ನಗರದ ಸಂಚಾರ ದಟ್ಟಣೆ ಗಣನೀಯವಾಗಿ ತಗ್ಗಿ, ಪ್ರಸ್ತುತ 60 ನಿಮಿಷ ತೆಗೆದುಕೊಳ್ಳುವ ಪ್ರಯಾಣವು ಕೇವಲ 20 ನಿಮಿಷಕ್ಕೆ ಇಳಿಕೆಯಾಗಲಿದೆ. NH-19 ನಿಂದ ಕಾಶಿ ರೈಲ್ವೆ ನಿಲ್ದಾಣದವರೆಗಿನ ಪ್ರಯಾಣವು 50 ನಿಮಿಷದಿಂದ 25 ನಿಮಿಷಕ್ಕೆ ತಗ್ಗಲಿದೆ.
ಸುಗಮ ಸಂಪರ್ಕ : ಲಾಲ್ ಬಹದ್ದೂರ್ ಶಾಸ್ತ್ರಿ ವಿಮಾನ ನಿಲ್ದಾಣ, ಕಾಶಿ ರೈಲ್ವೆ ನಿಲ್ದಾಣ, ವಾರಾಣಸಿ ಸಿಟಿ ರೈಲ್ವೆ ನಿಲ್ದಾಣ, ಪಂಡಿತ್ ದೀನದಯಾಳ್ ಉಪಾಧ್ಯಾಯ ಜಂಕ್ಷನ್ ಮತ್ತು ರಾಮನಗರ ಜಲಮಾರ್ಗ ಬಂದರಿಗೆ ಸಂಪರ್ಕ ಸುಲಭವಾಗಲಿದೆ.
ಪ್ರವಾಸೋದ್ಯಮಕ್ಕೆ ಉತ್ತೇಜನ : ಕಾಶಿ ವಿಶ್ವನಾಥ ದೇವಾಲಯ, ಬನಾರಸ್ ಹಿಂದೂ ವಿಶ್ವವಿದ್ಯಾಲಯ (BHU), ನಮೋ ಘಾಟ್ ಮತ್ತು ರಾಮನಗರ ಕೋಟೆಯಂತಹ ಪ್ರಮುಖ ಪ್ರವಾಸಿ ತಾಣಗಳಿಗೆ ಸುಲಭ ಪ್ರವೇಶ ಸಿಗುವುದರಿಂದ ಪ್ರವಾಸೋದ್ಯಮ ಮತ್ತು ಧಾರ್ಮಿಕ ಯಾತ್ರೆಗಳಿಗೆ ಹೆಚ್ಚಿನ ಉತ್ತೇಜನ ಸಿಗಲಿದೆ.
ಸರ್ಕಾರದ ನಿರೀಕ್ಷೆ
ಈ ಯೋಜನೆಯು ‘ಪಿಎಂ ಗತಿ ಶಕ್ತಿ’ ರಾಷ್ಟ್ರೀಯ ಮಾಸ್ಟರ್ ಪ್ಲಾನ್ನ ಭಾಗವಾಗಿದೆ. ಇದು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದಲ್ಲದೆ, ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲಿದೆ. ಜೊತೆಗೆ, ಇಂಧನ ಬಳಕೆ ಹಾಗೂ ಸಾರಿಗೆ ವೆಚ್ಚದಲ್ಲಿ ಕಡಿತ, ಮಾಲಿನ್ಯ ನಿಯಂತ್ರಣ ಮತ್ತು ಪೂರ್ವ ಉತ್ತರ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಹೊಸ ವೇಗ ನೀಡುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.



