ಮಂಡ್ಯ : ರಾಜ್ಯದಲ್ಲಿ ದಿನೇದಿನೇ ಹೆಚ್ಚುತ್ತಿರುವ ಬೇಸಿಗೆ ತಾಪಮಾನದಿಂದಾಗಿ ಬೆಂಗಳೂರು ಸೇರಿದಂತೆ ಹಳೇ ಮೈಸೂರು ಭಾಗದ ಜನರಲ್ಲಿ ಕುಡಿಯುವ ನೀರಿನ ಕೊರತೆ ಭೀತಿ ಹೆಚ್ಚಾಗಿದೆ. ಇದರ ಪ್ರಮುಖ ಕಾರಣವೆಂದರೆ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣ ರಾಜ ಸಾಗರ ಅಣೆಕಟ್ಟಿನ ನೀರಿನ ಮಟ್ಟ 90 ಅಡಿಗೆ ಕುಸಿದಿರುವುದು ಈ ಆತಂಕಕ್ಕೆ ಮುಖ್ಯ ಕಾರಣವಾಗಿದೆ.
ಇನ್ನು 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ ಸದ್ಯ 90 ಅಡಿ ನೀರು ಮಾತ್ರ ಉಳಿದಿದ್ದು, ಒಟ್ಟು 16 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಡ್ಯಾಂನಲ್ಲಿ 7 ಟಿಎಂಸಿ ಡೆಡ್ ಸ್ಟೋರೇಜ್ ಆಗಿರುವುದರಿಂದ, ಬಳಕೆಗೆ ಕೇವಲ 9 ಟಿಎಂಸಿ ನೀರು ಲಭ್ಯವಿದೆ.
ಸರ್ಕಾರಕ್ಕೆ ದೊಡ್ಡ ಸವಾಲು : ಉಳಿದಿರುವ ನೀರನ್ನು ಸಮರ್ಪಕವಾಗಿ ಹಂಚಿಕೆ ಮಾಡುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಬೆಂಗಳೂರು, ಮೈಸೂರು ಹಾಗೂ ಮಂಡ್ಯ ನಗರಗಳ ಕುಡಿಯುವ ನೀರಿನ ಅವಶ್ಯಕತೆ ಪೂರೈಸುವುದರ ಜೊತೆಗೆ, ಮಂಡ್ಯ ಭಾಗದ ರೈತರ ಬೆಳೆಗಳ ರಕ್ಷಣೆಗೆ ನೀರು ಹರಿಸುವ ಅಗತ್ಯವಿದ್ದು, ಇದರೊಂದಿಗೆ ತಮಿಳುನಾಡಿಗೆ ನ್ಯಾಯಾಲಯದ ಆದೇಶದಂತೆ ನಿಗದಿತ ಪ್ರಮಾಣದ ನೀರು ಬಿಡುಗಡೆ ಮಾಡಬೇಕಾದ ಒತ್ತಡವೂ ಇದೆ.
ಮುಂಗಾರು ಮಳೆ ಸಮಯಕ್ಕೆ ಸರಿಯಾಗಿ ಆಗಮಿಸದಿದ್ದರೆ, ಹಳೇ ಮೈಸೂರು ಭಾಗದಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಜಲಾಶಯದ ನೀರನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕ್ಯುಸೆಕ್ ಮತ್ತು ಟಿಎಂಸಿ ಅರ್ಥವೇನು?
‘ಕ್ಯುಸೆಕ್’ ಎಂದರೆ ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿಯುವ ಪ್ರಮಾಣ. ಇದನ್ನು Cubic Feet per Second (Cusec) ಎಂದು ಕರೆಯಲಾಗುತ್ತದೆ. ಒಂದು ಘನ ಅಡಿ ನೀರು ಸುಮಾರು 28.317 ಲೀಟರ್ಗೆ ಸಮಾನ. 11,524 ಕ್ಯುಸೆಕ್ ನೀರು 24 ಗಂಟೆಗಳ ಕಾಲ ನಿರಂತರವಾಗಿ ಹರಿದರೆ ಅದನ್ನು 1 ಟಿಎಂಸಿ ಎಂದು ಪರಿಗಣಿಸಲಾಗುತ್ತದೆ. ಅದೇ ರೀತಿ, 10 ಸಾವಿರ ಕ್ಯುಸೆಕ್ ನೀರು 24 ಗಂಟೆಗಳ ಕಾಲ ಹರಿದರೆ ಸುಮಾರು 0.864 ಟಿಎಂಸಿ ನೀರು ಹರಿದಂತಾಗುತ್ತದೆ.



