ಕನ್ನಡ ಚಿತ್ರರಂಗ ಇತ್ತೀಚಿನ ದಿನಗಳಲ್ಲಿ ದೊಡ್ಡ ಯಶಸ್ಸಿನ ಸಿನಿಮಾಗಳ ಕೊರತೆಯನ್ನು ಎದುರಿಸುತ್ತಿದ್ದು, ಈ ಬಗ್ಗೆ ನಟ ಡಾಲಿ ಧನಂಜಯ್ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ತಮ್ಮ ನಿರ್ಮಾಣ ಹಾಗೂ ಅಭಿನಯದ ‘ಮದರ್ ಪ್ರಾಮಿಸ್’ ಚಿತ್ರದ ಪ್ರಚಾರದ ವೇಳೆ ಮಾಧ್ಯಮವೊದರಲ್ಲಿ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಧನಂಜಯ್, ಕನ್ನಡ ಚಿತ್ರರಂಗದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಪುನೀತ್ ರಾಜ್ಕುಮಾರ್ ಅವರ ನಿಧನ ಹಾಗೂ ನಟ ದರ್ಶನ್ ಜೈಲು ಸೇರಿದ ಘಟನೆಗಳು ಕನ್ನಡ ಚಿತ್ರರಂಗದ ಮೇಲೆ ಪರಿಣಾಮ ಬೀರಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎರಡೂ ಘಟನೆಗಳು ಚಿತ್ರರಂಗಕ್ಕೆ ದೊಡ್ಡ ಆಘಾತವಾಗಿದ್ದವು ಎಂದು ಹೇಳಿದರು.
ಪುನೀತ್ ರಾಜ್ಕುಮಾರ್ ಹಾಗೂ ದರ್ಶನ್ ಕನ್ನಡ ಚಿತ್ರರಂಗದ ಎರಡು ದೊಡ್ಡ ಮರಗಳು, ಎರಡು ದೊಡ್ಡ ಶಕ್ತಿಗಳು. ಆ ಎರಡು ಘಟನೆಗಳು ಚಿತ್ರರಂಗದ ಮೇಲೆ ದೊಡ್ಡ ಪ್ರಭಾವ ಬೀರಿವೆ ಎಂದಿದ್ದಾರೆ.
ಇದೇ ವೇಳೆ ಅವರು ಭಾವುಕರಾಗಿ, ನನಗೆ ಟೈಮ್ ಟ್ರಾವೆಲ್ ಮಾಡುವ ಅವಕಾಶ ಸಿಕ್ಕರೆ ಆ ಎರಡು ಘಟನೆಗಳನ್ನು ತಡೆಯಲು ಪ್ರಯತ್ನಿಸುತ್ತೇನೆ. ಅವು ನಡೆಯಬಾರದಿತ್ತು. ಆದರೆ ನಡೆದದ್ದನ್ನು ಬದಲಾಯಿಸಲು ಸಾಧ್ಯವಿಲ್ಲ. ಮುಂದೆ ಚಿತ್ರರಂಗವನ್ನು ಹೇಗೆ ಮುನ್ನಡೆಸಬೇಕು ಎಂಬುದರ ಬಗ್ಗೆ ಯೋಚಿಸಿ ಕೆಲಸ ಮಾಡಬೇಕು ಎಂದು ಹೇಳಿದರು.
ಕನ್ನಡ ಚಿತ್ರರಂಗ ಮತ್ತೆ ಚೇತರಿಸಿಕೊಂಡು ಉತ್ತಮ ಸಿನಿಮಾಗಳ ಮೂಲಕ ಯಶಸ್ಸು ಕಾಣಲಿ ಎಂಬ ಆಶಯವನ್ನೂ ಧನಂಜಯ್ ವ್ಯಕ್ತಪಡಿಸಿದರು.



