ಬೆಂಗಳೂರು: ಅತ್ಯಾಚಾರ ಮಾಡಿಸಿದ ಆರೋಪದ ಪ್ರಕರಣದಲ್ಲಿ ಬಂಧನದ ಭೀತಿಯಿಂದ ಹೈಕೋರ್ಟ್ ಮೊರೆ ಹೋಗಿದ್ದ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರ ಏಕಸದಸ್ಯ ಪೀಠ, ಮುನಿರತ್ನ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿ, ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿದೆ. ಜೊತೆಗೆ, ಪ್ರಕರಣದ ಉಳಿದ ಆರೋಪಿಗಳಿಗೂ ಸಹ ಅದೇ ರೀತಿಯ ರಕ್ಷಣೆ ನೀಡಲಾಗಿದೆ.
ಮುಂದಿನ ವಿಚಾರಣೆಯನ್ನು ಜೂನ್ 17ಕ್ಕೆ ಮುಂದೂಡಲಾಗಿದೆ.
ಸಂತ್ರಸ್ತೆ ಮಹಿಳೆ ನೀಡಿದ ದೂರಿನ ಪ್ರಕಾರ, 2013ರ ವಿಧಾನಸಭಾ ಚುನಾವಣೆಯಲ್ಲಿ ಮುನಿರತ್ನ ವಿರುದ್ಧ ಕೆಲಸ ಮಾಡಿದ್ದರಿಂದ ತಮಗೆ ನಕಲಿ ವ್ಯಭಿಚಾರ ದಂಧೆ ಪ್ರಕರಣ ದಾಖಲಿಸಿ, ಬಂಧನಕ್ಕೆ ಯತ್ನಿಸಲಾಯಿತು ಎಂದು ಆರೋಪಿಸಿದ್ದಾರೆ. 2023ರ ಜೂನ್ 11ರಂದು ಮುನಿರತ್ನ ಮನೆಗೆ ಕರೆದೊಯ್ದು, ದ್ವಿತೀಯ ಮಹಡಿಯಲ್ಲಿ ವಸಂತ್, ಚನ್ನಕೇಶವ ವಿವಸ್ತ್ರಗೊಳಿಸಿ, ಚುಚ್ಚು ಮದ್ದನ್ನು ಕೊಡಿಸಿ ಮತ್ತೊಬ್ಬ ವ್ಯಕ್ತಿಯಿಂದ ಅತ್ಯಾಚಾರ ಮಾಡಿಸಿದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದರು. 2020ರಲ್ಲಿ ಮುನಿರತ್ನ ಬಿಜೆಪಿ ಸೇರಿದ್ದಾಗಿನಿಂದ ಸಂತ್ರಸ್ತೆ ಮೇಲೆ ಹಲವು ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದವು.