ಎಚ್.ಡಿ.ಕೋಟೆ : ಪೀಪಲ್ ಟ್ರೀ ಸಂಸ್ಥೆಯ ವತಿಯಿಂದ ಸಾವಯವ ಕೃಷಿ ಹಾಗೂ ಸಿರಿಧಾನ್ಯ ಬೆಳೆಯ ಉತ್ತೇಜನದ ಉದ್ದೇಶದಿಂದ ರೈತರು, ಸಿರಿಧಾನ್ಯ ಸೋದರಿಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಿಗೆ ವಿಶೇಷ ತರಬೇತಿ ಮತ್ತು ಅಧ್ಯಯನ ಪ್ರವಾಸವನ್ನು ಆಯೋಜಿಸಲಾಯಿತು.
ಎಚ್.ಡಿ.ಕೋಟೆ ತಾಲೂಕಿನ 12 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ರೈತರು ಹಾಗೂ ಸಿರಿಧಾನ್ಯ ಸೋದರಿಯರನ್ನು ಕುಶಾಲನಗರಕ್ಕೆ ಕರೆದೊಯ್ಯಲಾಗಿದ್ದು, ಸುಮಾರು 50 ವರ್ಷಗಳಿಂದ ಸಾವಯವ ಕೃಷಿ ಮಾಡುತ್ತಿರುವ ಅಫ್ತಾಬ್ ಎಂ.ಬಿ. ಅವರು ತರಬೇತಿ ನೀಡಿದರು.
ಈ ವೇಳೆ ಮಾತನಾಡಿದ ಅಫ್ತಾಬ್ ಅವರು ಇತ್ತೀಚಿನ ದಿನಗಳಲ್ಲಿ ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳು ಹಾಗೂ ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಅತಿಯಾದ ಬಳಕೆಯಿಂದ ಭೂಮಿಯ ಫಲವತ್ತತೆ ಕುಸಿಯುತ್ತಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದರು. ಇನ್ನೂ ರೈತರು ತಮ್ಮ ಜಮೀನಿನಲ್ಲೇ ಗುಣಮಟ್ಟದ ಬಿತ್ತನೆ ಬೀಜಗಳನ್ನು ಸಂಗ್ರಹಿಸಿ ಸಂರಕ್ಷಿಸುವ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಸಾವಯವ ಕೃಷಿಗೆ ಉತ್ತೇಜನ ದೊರೆಯುವುದರ ಜೊತೆಗೆ ಉತ್ತಮ ಇಳುವರಿ ಹಾಗೂ ಹೆಚ್ಚುವರಿ ಆದಾಯ ಗಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಸಾವಯವ ಕೃಷಿ ಮತ್ತು ಸಿರಿಧಾನ್ಯ ಬೆಳೆಯ ಮಹತ್ವ, ಬೀಜ ಸಂರಕ್ಷಣೆ ವಿಧಾನಗಳು ಹಾಗೂ ಸ್ವಾವಲಂಬಿ ಕೃಷಿಯ ಕುರಿತು ರೈತರೊಂದಿಗೆ ಸಂವಾದವೂ ನಡೆಯಿತು.
ಕಾರ್ಯಕ್ರಮದಲ್ಲಿ ಪೀಪಲ್ ಟ್ರೀ ಸಂಸ್ಥೆಯ ಜವರೇಗೌಡ, ಲತಾ, ಸುರೇಶ್, ಬಸಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಮರಲಿಂಗಯ್ಯ, ಟಿ.ಮಂಜು, ರೇಖಾ, ಗುರುಸ್ವಾಮಿ, ಬ್ಯಾಟರಾಯ ಸ್ವಾಮಿ, ರೀನಾ, ವಿಜಯಲಕ್ಷ್ಮಿ, ಶ್ರೀನಿವಾಸ ಸೇರಿದಂತೆ ಸಿರಿಧಾನ್ಯ ಸೋದರಿಯರು ರೈತರು ಭಾಗವಹಿಸಿದ್ದರು.



