ಬೆಂಗಳೂರು : ತುಮಕೂರಿನಲ್ಲಿ ನಡೆಯುವ ರಾಜ್ಯಸರ್ಕಾರದ ಮೂರನೇ ವರ್ಷದ ಸಾಧನಾ ಸಮಾವೇಶಕ್ಕೆ ಸಾರಿಗೆ ನೌಕರರು ಕಪ್ಪು ಬಾವುಟ ಪ್ರದರ್ಶಿಸಲು ಮುಂದಾಗಿದ್ದಾರೆ. ಸಾರಿಗೆ ನೌಕರರ ಮುಷ್ಕರಕ್ಕೆ 21 ದಿನಗಳ ಮೊದಲೇ ನೋಟೀಸ್ನೀಡಲಾಗಿದೆ. ಆದರಂತೆ ಮೇ 20 ರಿಂದ ಅನಿರ್ಧಿಷ್ಠಾವಧಿ ಮುಷ್ಕರ ಶುರುವಾಗಲಿದೆ ಎಂದು ಕೆಎಸ್ಆರ್ಟಿಸಿ ನೌಕರರ ಮತ್ತು ಸಿಬ್ಬಂದಿಗಳ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ್ಭಾಸ್ಕರ್ ತಿಳಿಸಿದ್ದಾರೆ.
ಕೆಲವರು ಹಿಂದಿನ ದಿನವೇ ಕೆಲಸ ಸ್ಥಗಿತಗೊಳಿಸುವ ಸಾಧ್ಯತೆ ಇದೆ. ತಡರಾತ್ರಿ ತಂಗುವ ಬಸ್ಗಳು ಮತ್ತು ದೂರದೂರಿಗೆ ರಾತ್ರಿ ಪ್ರಯಾಣ ಆರಂಭಿಸುವ ಚಾಲಕರು ಮತ್ತು ಸಿಬ್ಬಂದಿಗಳು ಹಿಂದಿನ ದಿನವೇ ತಮ್ಮ ಮುಷ್ಕರವನ್ನು ಆರಂಭಿಸಲಿದ್ದಾರೆ. ಉಳಿದಂತೆ ಮೇ 20 ರಂದು ಬೆಳಗ್ಗೆ 6 ಗಂಟೆಯಿಂದಲೇ ಎಲ್ಲಾ ಸಾರಿಗೆ ಬಸ್ಗಳು ಸ್ಥಗಿತಗೊಳ್ಳಲಿದೆ ಎಂದು ವಿಜಯ್ ಭಾಸ್ಕರ್ ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಸಾರಿಗೆ ನೌಕರರ ಮುಷ್ಕರಕ್ಕೆ ಹೆದರಿ ಮೇ 20ರಂದು ತುಮಕೂರಿನಲ್ಲಿ ನಡೆಯಬೇಕಿದ್ದ ಸಾಧನಾ ಸಮಾವೇಶವನ್ನು ಒಂದು ದಿನ ಮುಂಚಿತವಾಗಿ ಅಂದರೆ, ಮೇ 19ರಂದೇ ನಡೆಸುತ್ತಿದೆ. ಅಂದು ತುಮಕೂರಿನಲ್ಲಿ ಸಾರಿಗೆ ನಿಗಮಗಳ ನೌಕರರು ಸಾಧನಾ ಸಮಾವೇಶಕ್ಕೆ ಕಪ್ಪು ಬಾವುಟ ಪ್ರದರ್ಶಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದಿಲ್ಲ, ಬದಲಾಗಿ ತುಮಕೂರಿನ ಟೌನ್ಹಾಲ್ ಸರ್ಕಲ್ನಲ್ಲಿ ಸುಮಾರು ಒಂದು ಸಾವಿರ ಜನ ಸಮಾವೇಶಗೊಂಡು ಕಪ್ಪು ಬಾವುಟ ಪ್ರದರ್ಶಿಸುತ್ತೇವೆ ಎಂದು ವಿಜಯ್ ಭಾ ಸ್ಕರ್ ತಿಳಿಸಿದ್ದಾರೆ.
ವೇತನ ಪರಿಷ್ಕರಣೆ ಹಾಗೂ ಇತರ ಬೇಡಿಕೆಗಳ ಈಡೇರಿಕೆಗೆ ನಮ್ಮ ಒತ್ತಾಯ ನ್ಯಾಯ ಬದ್ಧವಾಗಿದೆ. ಹಲವು ಬಾರಿ ಚರ್ಚೆ ನಡೆಸಿದರೂ ಸರ್ಕಾರ ಸ್ಪಂದಿಸುತ್ತಿಲ್ಲ, ಕೊನೆಗೆ ಏಕಪಕ್ಷೀಯವಾಗಿ ಶೇ. 12.5ರಷ್ಟು ವೇತನ ಹೆಚ್ಚಿಸಿ, ಆದೇಶ ಹೊರಡಿಸಲಾಗಿದೆ. ಇದು ಒಪ್ಪಿತವಲ್ಲ ಎಂದು ಹೇಳಿದರು.



