ಮೈಸೂರು : ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿ ಮಠದಲ್ಲಿ ಪ್ರಧಾನ್ ಅವರು ಬೆಳಗಿನ ಉಪಹಾರ ಸೇವಿಸಿದರು. ಕೆಎಸ್ಒಯುನಲ್ಲಿ ಆರ್ಎಸ್ಎಸ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಈ ಭೇಟಿ ಆಯೋಜಿಸಲಾಗಿತ್ತು.
ಸುತ್ತೂರು ಮಠವು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳ ಜೊತೆಗೆ, ಶಿಕ್ಷಣ ಕ್ಷೇತ್ರದಲ್ಲೂ ಗಮನಾರ್ಹ ಕೊಡುಗೆಗಳನ್ನು ನೀಡಿದೆ. ಮಠದ ಶೈಕ್ಷಣಿಕ ಸಂಸ್ಥೆಗಳು ಭಾರತದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಮೈಸೂರಿನಲ್ಲಿ ಒಂದು ವೈದ್ಯಕೀಯ ಕಾಲೇಜು, ಒಂದು ದಂತ ವೈದ್ಯಕೀಯ ಕಾಲೇಜು ಮತ್ತು ಎರಡು ಔಷಧ ವಿಜ್ಞಾನ ಕಾಲೇಜುಗಳು ಸೇರಿವೆ. ಇದಲ್ಲದೆ, ನೋಯ್ಡಾ ಮತ್ತು ಜಮ್ಮುವಿನಲ್ಲಿಯೂ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಜಮ್ಮುವಿನಲ್ಲಿ ಔಷಧ ವಿಜ್ಞಾನ ಕಾಲೇಜು ಆರಂಭಿಸಲು ಮನೋಜ್ ಸಿನ್ಹಾ ಅವರು ಸುತ್ತೂರು ಶ್ರೀಗಳೊಂದಿಗೆ ಚರ್ಚಿಸಿದ್ದರು.
ಜಮ್ಮು ಕೇಂದ್ರಾಡಳಿತ ಪ್ರದೇಶವಾದ ನಂತರ ಅಲ್ಲಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವ ಕುರಿತು ಪ್ರೇರಣೆ ನೀಡಿದ್ದರು. ಜಮ್ಮುವಿನಲ್ಲಿ ಪ್ರಾರಂಭವಾದ ಔಷಧ ವಿಜ್ಞಾನ ಕಾಲೇಜು ಇದೀಗ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸುತ್ತೂರು ಮಠದ ಔಷಧ ವಿಜ್ಞಾನ ಕಾರ್ಯಕ್ರಮಗಳು ರಾಷ್ಟ್ರೀಯ ಸಂಸ್ಥೆ ಶ್ರೇಯಾಂಕ ಚೌಕಟ್ಟಿನಲ್ಲಿ (ಎನ್ಐಆರ್ಎಫ್) ನಿರಂತರವಾಗಿ ಉನ್ನತ ಸ್ಥಾನಗಳನ್ನು ಗಳಿಸಿವೆ. ಸಾಮಾನ್ಯವಾಗಿ ಅಗ್ರ ಐದು ಸ್ಥಾನಗಳಲ್ಲಿ ಒಂದಾದ ನಾಲ್ಕನೇ ಅಥವಾ ಐದನೇ ಸ್ಥಾನವನ್ನು ಪಡೆದಿವೆ.
ಮಠವು ತಾಯ್ನುಡಿಗಳ ಅಭಿವೃದ್ಧಿಗೂ ಆದ್ಯತೆ ನೀಡಿದೆ. ಭಾರತದಾದ್ಯಂತ 200ಕ್ಕೂ ಹೆಚ್ಚು ಸ್ಥಳೀಯ ತಾಯ್ನುಡಿಗಳ ಅಭಿವೃದ್ಧಿ ಮತ್ತು ಪ್ರಚಾರಕ್ಕಾಗಿ ಕಾರ್ಯೋನ್ಮುಖವಾಗಿದೆ. ಸುಮಾರು ಮೂರು ವರ್ಷಗಳ ಹಿಂದೆ ಸುತ್ತೂರು ಶ್ರೀಗಳು ಯೋಗಿ ಜಿ ಅವರನ್ನು ಭೇಟಿಯಾಗಿದ್ದರು. ಈ ಭೇಟಿಯ ನಂತರ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಕುರಿತು ಯೋಚಿಸಲಾಯಿತು. ಅದಕ್ಕೆ ಅನುಸಾರವಾಗಿ ಅರ್ಜಿ ಸಲ್ಲಿಸಿ, ಕಳೆದ ವರ್ಷ ಖಾಸಗಿ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಪಡೆದುಕೊಳ್ಳಲಾಯಿತು. ಇದಕ್ಕಾಗಿ ಹೆಚ್ಚುವರಿಯಾಗಿ 25 ಎಕರೆ ಭೂಮಿಯನ್ನು ವಿದ್ಯಾಪೀಠದ ವಿಸ್ತರಣೆಗಾಗಿ ಹಂಚಿಕೆ ಮಾಡಲಾಗಿದೆ. ಈ ವಿಸ್ತರಣೆಯು ಮುಕ್ತ ಕೋರ್ಸ್ಗಳು, ಉದ್ಯೋಗಾವಕಾಶ ಮತ್ತು ಸಹಭಾಗಿತ್ವದಂತಹ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲು ಸಹಾಯಕವಾಗಲಿದೆ. ಕೇಂದ್ರ ಸಚಿವರ ಭೇಟಿಯು ಮಠದ ಈ ವೈವಿಧ್ಯಮಯ ಶೈಕ್ಷಣಿಕ ಮತ್ತು ಸಾಮಾಜಿಕ ಕೊಡುಗೆಗಳಿಗೆ ಇನ್ನಷ್ಟು ಗಮನ ಸೆಳೆಯಿತು.



