ಬೆಂಗಳೂರು : BJP-RSS ಅವರನ್ನ ಕೊಲ್ಲಬೇಕು ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರನ್ನ ಸಮರ್ಥನೆ ಮಾಡಿಕೊಂಡ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ತಿಹಾರ್ ಜೈಲಿಗೆ ಹಾಕಬೇಕು ಅಂತ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರನ್ನ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಒತ್ತಾಯ ಮಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ BJP-RSS ಅವರನ್ನ ಕೊಲ್ಲಿ ಅಂತ ಹೇಳಿದ್ದಾರೆ. ಪ್ರಚೋದನಕಾರಿ ಹೇಳಿಕೆ ಕೊಟ್ಟಿದ್ದಾರೆ. ಇಡೀ ದೇಶದಲ್ಲಿ ಅವರಿಗೆ ಹಿಡಿಶಾಪ ಹಾಕ್ತಿದ್ದಾರೆ. ಖರ್ಗೆ ಕುರಾನ್ನಲ್ಲಿ ಇರುವ ಒಂದು ವಿಷಯ ಪ್ರಸ್ತಾಪ ಮಾಡಿದ್ದಾರೆ. ವಿಷಕಾರಿ ಹಾವನ್ನು ಸಾಯಿಸಬೇಕು ಅಂತ ಹೇಳಿದ್ದಾರೆ. BJP-RSS ವಿಷಕಾರಿ ಹಾವು ಅಂದಿದ್ದಾರೆ. ಅವರೇನು ನೋಡಿದ್ದಾರಾ? ಖರ್ಗೆ ನಾಲಿಗೆ ಹದ್ದುಬಸ್ತಿನಲ್ಲಿ ಇರಬೇಕಿತ್ತು. ನಿಮಗೆ ಅರಳು-ಮರಳೋ ಅಥವಾ ಮಾನಸಿಕ ಆರೋಗ್ಯ ಕೆಟ್ಟಿದೆಯಾ? ಇದು ದ್ವೇಷ ಭಾಷಣ ಆಗುತ್ತದೆ. ಕರ್ನಾಟಕದಲ್ಲಿ ದ್ವೇಷ ಭಾಷಣ ಬಿಲ್ ಪಾಸ್ ಆಗಿದೆ. ಬಿಜೆಪಿ ಈಗಾಗಲೇ ಖರ್ಗೆ ವಿರುದ್ಧ ದೂರು ಕೊಟ್ಟಿದ್ದಾರೆ. ರಜಾಕಾರರ ನಮ್ಮ ಕುಟುಂಬದವರನ್ನ ಕೊಂದರು ಅಂತ ಖರ್ಗೆ ಹೇಳಿದ್ರು. ನಿಮಗೆ ಯಾರ ಮೇಲೆ ಕೋಪ ಇರಬೇಕಿತ್ತು? ರಜಾಕಾರರ ಮೇಲೆ ಕೋಪ ಇರಬೇಕಿತ್ತು. ಆದರೆ, ಅವರನ್ನ ಎತ್ತಿಕಟ್ಟಿ BJP-RSS ಕೊಲ್ಲಬೇಕು ಅಂತೀರಾ. ನಾಚಿಕೆ ಆಗೊಲ್ಲವಾ ಎಂದು ಕಿಡಿಕಾರಿದರು.
ನಿಮ್ಮ ತಂದೆ ನಿಮಗೆ ದನ ಕಾದು ಅಕ್ಷರ ಕಲಿಸಿ ವಿದ್ಯೆ ಕೊಟ್ಟರು. ಅವರನ್ನ ನೀವು ಮನೆಗೆ ಸೇರಿಸಿಲ್ಲ ಅಂತ ಅನೇಕರು ಹೇಳ್ತಾರೆ. BJP-RSS ನಿಮಗೆ ಏನು ಮಾಡಿದೆ? ಯಾರನ್ನು ಮೆಚ್ಚಿಸಲು ಹೇಳಿಕೊಡ್ತಾ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪ್ರಿಯಾಂಕ್ ಖರ್ಗೆ ಅಪ್ಪನನ್ನ ಡಿಫೆಂಡ್ ಮಾಡಿಕೊಂಡಿದ್ದಾರೆ. ಅಸ್ಸಾಂ ಸಿಎಂ ಬಗ್ಗೆ ಬ್ರಾಹ್ಮಣರು ಅಂತಿದ್ದಾರೆ. ಬ್ರಾಹ್ಮಣ ಯಾರು ಹೀಗೆ ಮಾತಾಡೊಲ್ಲ. ನೀವು ಹೀಗೆ ಮಾತಾಡೋದಕ್ಕೆ ನಿಮ್ಮ ಮನೆಯಲ್ಲಿ ಇರೋ ಬ್ರಾಹ್ಮಣರು ಹೇಳಿಕೊಟ್ರಾ? ನಿಮ್ಮ ಮನೆ ತುಂಬ ಬ್ರಾಹ್ಮಣರು ತುಂಬಿಕೊಂಡು ನಮ್ಮದು ದಲಿತ ರಕ್ತ ಅಂತ ಯಾಕೆ ಬೊಗಳುತ್ತೀರಾ? ನಿಮ್ಮ ಮನೆಗೆ ಬ್ರಾಹ್ಮಣರನ್ನ ಮದುವೆ ಮಾಡಿಕೊಂಡು ಬಂದು, ನಿಮ್ಮ ಮಕ್ಕಳನ್ನು ಬ್ರಾಹ್ಮಣರಿಗೆ ಕೊಟ್ಟಿದ್ದೀರಾ. ಮುಸ್ಲಿಮರ ಮೇಲೆ ಪ್ರೀತಿ ಇದ್ದರೆ ನೀವು ಮುಸ್ಲಿಮರನ್ನ ಮದುವೆ ಆಗಬಹುದಿತ್ತು. ನಿಮ್ಮ ಹೆಣ್ಣು ಮಕ್ಕಳನ್ನು ಮುಸ್ಲಿಮರಿಗೆ ಕೊಡಬಹುದಿತ್ತು ಯಾಕೆ ಕೊಡಲಿಲ್ಲ. ಯಾರು ತಡೆದರು. ಅಪ್ಪ-ಮಗನ ಮನಸ್ಥಿತಿ ಒಂದೇ ಆಗಿದೆ. ಇವರ ಸಪೋರ್ಟ್ಗೆ ಕಾಂಗ್ರೆಸ್ನಲ್ಲಿ ಯಾರು ಬಂದಿಲ್ಲ. ವೈಯಕ್ತಿಕ ಹೇಳಿಕೆ ರೀತಿ ಇವರನ್ನ ನೆಗ್ಲೆಟ್ ಮಾಡಿದ್ದಾರೆ. ತಮ್ಮನ್ನ ಯಾವು ಹೆಚ್ಚಿಗೆ ಕಾಣಿಸಿಕೊಳ್ಳಬೇಕು ಅಂತ ಹೀಗೆ ಮಾತಾಡಿದ್ದಾರೆ. ಇವರ ತಲೆಯಲ್ಲಿ ವಿಷಕಾರಿ ಹಾವಿಗಿಂತ ಹೆಚ್ಚು ವಿಷ ಇವರಿಬ್ಬರ ತಲೆಯಲ್ಲಿ ಇದೆ. ಪ್ರಧಾನಿ ಮೋದಿ, ಅಮಿತ್ ಶಾ ಸುಮೋಟೋ ಕೇಸ್ ಹಾಕಿಸಿಕೊಂಡು ಅಪ್ಪ-ಮಗನನ್ನ ತಿಹಾರ್ ಜೈಲಿಗೆ ಹಾಕಬೇಕು. ದ್ವೇಷ ಭಾಷಣಕ್ಕೆ 10 ವರ್ಷ ಜೈಲಿದೆ. ಹೀಗಾಗಿ, ಇಬ್ಬರನ್ನ ತಿಹಾರ್ ಜೈಲಿಗೆ ಕಳಿಸಬೇಕು. ಮಂಗ ತಾನು ಕೆಡೋದಲ್ಲದೆ ವನ ಕೆಡಿಸಿದಂತೆ ಇವರು ಸಮಾಜ ಕೆಡಿಸೋ ಕೆಲಸ ಮಾಡ್ತಾ ಇದ್ದಾರೆ ಅಂತ ಅಪ್ಪ-ಮಗನ ವಿರುದ್ಧ ಛಲವಾದಿ ವಾಗ್ದಾಳಿ ನಡೆಸಿದರು.
ನೀವು ದಲಿತ ಕಾರ್ಡ್ ಯಾಕೆ ಬಳಕೆ ಮಾಡ್ತೀರಾ? ನೀವು ರಾಷ್ಟ್ರೀಯ ಪಕ್ಷದ ಅಧ್ಯಕ್ಷರು. ನೀವು ಜಾತಿ ಬಿಟ್ಟು ಮಾತಾಡಬೇಕು. ಮನುಸ್ಮೃತಿ ಮೇಲೆ ಈ ದೇಶ ನಡೆಯುತ್ತಿಲ್ಲ. ಮನುಸ್ಮೃತಿ ಸತ್ತು ಹೋಗಿದೆ. ಅಂಬೇಡ್ಕರ್ ಸಂವಿಧಾನ ಈಗ ಇರೋದು. ಸಂವಿಧಾನದ ಅಡಿಯಲ್ಲಿ ನೀವು ಕೆಲಸ ಮಾಡಬೇಕು. ಜನರ ಮಧ್ಯೆ ವಿಷಬೀಜ ಬಿತ್ತೋ ಕೆಲಸ ಕಾಂಗ್ರೆಸ್ ಮಾಡ್ತಿದೆ. ಕಾಂಗ್ರೆಸ್ ಅನ್ನ ವಿಸರ್ಜನೆ ಮಾಡಿ ಅಂತ ಹೇಳಿದ್ರು, ಮಾಡಲಿಲ್ಲ. ನನಗೆ ಅನ್ನಿಸುತ್ತೆ ಕಾಂಗ್ರೆಸ್ ಬಾಗಿಲನ್ನ ಖರ್ಗೆಯಿಂದ ಮುಚ್ಚಿಸಿ ದಲಿತರಿಗೆ ಕೆಟ್ಟ ಹೆಸರು ತರೋಕೆ ಕಾಂಗ್ರೆಸ್ ಹೊರಟಿದ್ದಾರೆ. ಹೀಗಾಗಿ, ಸೋನಿಯಾ, ರಾಹುಲ್, ಪ್ರಿಯಾಂಕ್ ಅವರು ದಲಿತರಿಗೆ ಕೆಟ್ಟ ಹೆಸರು ತರಿಸಬೇಡಿ. ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಇಳಿಸಿ ಅಂತ ಮನವಿ ಮಾಡ್ತೀನಿ ಎಂದರು.



