ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ತಾಲೂಕಿನ ಕೆಪಿಎಸ್ ಹೆಬ್ಬಾಳು ಶಾಲೆಯ ಪ್ರೀ-ಸ್ಕೂಲ್ ಶಿಕ್ಷಕಿ ಎಸ್. ಲಕ್ಷ್ಮೀ ಅವರಿಗೆ ಕೀ ಎಜುಕೇಶನ್ ಫೌಂಡೇಶನ್ ಅವರು ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಅತ್ಯುತ್ತಮ ಸೇವೆಗಾಗಿ “ಬೆಸ್ಟ್ ಟೀಚರ್ ಅವಾರ್ಡ್” ನೀಡಿ ಗೌರವಿಸಲಾಗಿದೆ.
ಕರ್ನಾಟಕದಲ್ಲಿ ಎಲ್ಲಾ ಕೆಪಿಎಸ್ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್.ಕೆ.ಜಿ.ಮತ್ತು ಯು.ಕೆ.ಜೆ ಶಿಕ್ಷಕರನ್ನು ಬೆಸ್ಟ್ ಟೀಚರ್ ಅವಾರ್ಡ್ ಗಾಗಿ ಸ್ಪರ್ದೆಗೆ ಭಾಗವಹಿಸಲು ಅರ್ಜಿ ಆಹ್ವಾನಿಸಲಾಗಿತ್ತು ಇದರಲ್ಲಿ 365 ಶಿಕ್ಷಕರು ಭಾಗವಹಿಸಿದ್ದರು.
ಅಂತಿಮವಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಅವರ ಹೊಸ ಬೋಧನಾ ವಿಧಾನಗಳು, ಸಹನೆ,ವೃತ್ತಿ ನಿಷ್ಠೆ ಜತಗೆ ಶಾಲೆಯ ಮಕ್ಕಳ ಕಾಳಜಿಯನ್ನು ತೋರಿದ 5 ಮಂದಿ ಶಿಕ್ಷಕರನ್ನು ಈ ಅವಾರ್ಡ್ ಗೆ ಆಯ್ಕೆ ಮಾಡಲಾಗಿದೆ.
ಈ ಐದು ಮಂದಿ ಶಿಕ್ಷಕರಲ್ಲಿ ಹೆಬ್ಬಾಳು ಶಾಲೆಯಲ್ಲಿ ಕಳೆದ 5 ವರ್ಷಗಳಿಂದ ನಿಷ್ಠೆಯಿಂದ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ತಾಲೂಕಿನ ಸಿದ್ದನಕೊಪ್ಪಲು ಗ್ರಾಮದ ಎಸ್.ಲಕ್ಷ್ಮಿ ಅವರನ್ನು ಆಯ್ಕೆ ಮಾಡಲಾಗಿದೆ.
ಬೆಂಗಳೂರಿನ ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿ ಎಸ್.ಲಕ್ಷ್ಮಿ ಅವರಿಗೆ ಈ ಅವಾರ್ಡ್ ನ್ನು
ಪ್ರದಾನ ಮಾಡಲಾಗಿದ್ದು ತಾಲೂಕಿನ ಬಿಇಓ ಕೃಷ್ಣಪ್ಪ , ಬಿ.ಆರ್.ಸಿ. ವೆಂಕಟೇಶ್,ಅಕ್ಷರ ದಾಸೋಹದ ನಿರ್ದೇಶಕರಾದ ಸ್ವಾಮಿ ಗೌಡ ,ಶಿಕ್ಷಣ ಸಂಯೋಜಕರಾದ ದಾಸಪ್ಪ , ಸಿ.ಆರ್.ಪಿ. ಧರ್ಮರಾಜ್ ,ಶಾಲೆಯ ಪ್ರಾಂಶುಪಾಲರಾದ ಕಾಳಿಪ್ರಸಾದ್ , ಉಪ ಪ್ರಾಂಶುಪಾಲರಾದ ರಶ್ಮಿ, ಮುಖ್ಯಶಿಕ್ಷಕರಾದ ಸಿ.ಆರ್. ಜಲೇಂದ್ರ ಹಾಗೂ ಸಹ ಶಿಕ್ಷಕ ವೃಂದದವರು ಎಸ್ ಲಕ್ಷ್ಮಿ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇಲ್ಲಿ ಮತ್ತೊಂದು ವಿಶೇಷ ಏನಂದರೆ ಲಕ್ಷ್ಮಿ ಅವರು ಇದೇ ಶಾಲೆಯಲ್ಲಿ 8 ರಿಂದ ದ್ವಿತೀಯ ಪಿಯುಸಿ ವರೆಗೆ ಶಿಕ್ಷಣ ಪಡೆದಿದ್ದು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದು ಕೊಂಡಿದ್ದು ಪದವಿ ಶಿಕ್ಷಣ ಪಡೆದು ಎನ್.ಟಿ.ಟಿ ತರಬೇತಿ ಪಡೆದು ಇದೇ ಶಾಲೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಉತ್ತಮ ಸೇವೆಗೆ ಈ ಅವಾರ್ಡ್ ಬಂದಿರುವುದು ಮತ್ತೊಂದು ವಿಶೇಷವಾಗಿದೆ.



