ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆಯಲಿದ್ದು, ಸೋಮವಾರದೊಳಗೆ ಡಿ.ಕೆ. ಶಿವಕುಮಾರ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ ಎಂದು ಅವರ ಆಪ್ತ ಗುರು ಹಾಗೂ ರಾಜಗುರು ದ್ವಾರಕನಾಥ್ ಗುರೂಜಿ ಭರ್ಜರಿ ಭವಿಷ್ಯ ನುಡಿದಿದ್ದಾರೆ. ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿದ ಅವರು, ಮುಂದಿನ ಎಂಟು ವರ್ಷಗಳ ಕಾಲ ಡಿಕೆಶಿಯ ಅಧಿಕಾರವನ್ನು ಯಾರಿಂದಲೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಡಿ.ಕೆ. ಶಿವಕುಮಾರ್ ನನಗೆ ಕಳೆದ 35 ವರ್ಷಗಳಿಂದ ಪರಿಚಯ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಸಂಪುಟದಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಸಚಿವರಾಗಿದ್ದಾಗಲೇ, ನೀನು ಒಮ್ಮೆ ಕರ್ನಾಟಕದ ಮುಖ್ಯಮಂತ್ರಿ ಆಗ್ತೀಯಾ ಎಂದು ಹೇಳಿದ್ದೆ. ಅವನು ನಮ್ಮ ಮನೆಯ ಮಗನಂತೆಯೇ” ಎಂದು ಗುರೂಜಿ ಭಾವುಕರಾದರು.
ಸಿದ್ದರಾಮಯ್ಯ ಅವರ ಜಾತಕದ ಬಗ್ಗೆ ಮಾತನಾಡಿದ ಗುರೂಜಿ, “ಅವರಿಗೆ ಈಗ ಗುರುಬಲ ಮತ್ತು ಶನಿಬಲ ಕಡಿಮೆ. ಅವರ ರಾಜಯೋಗ ಮುಗಿದಿದೆ. ಆದರೆ ರಾಜ್ಯಕ್ಕೆ ಅವರ ಮಾರ್ಗದರ್ಶನ ಅಗತ್ಯ” ಎಂದರು. ಇನ್ನೊಂದೆಡೆ, ಡಿ.ಕೆ. ಶಿವಕುಮಾರ್ ಅವರಿಗೆ ಈಗ ಅತ್ಯುತ್ತಮ ಕಾಲ ಆರಂಭವಾಗಿದ್ದು, ಗುರು ಮಿಥುನ ರಾಶಿಯಲ್ಲಿರುವುದರಿಂದ ಭಾರಿ ರಾಜಯೋಗ ಬಂದಿದೆ ಎಂದು ಹೇಳಿದರು.
“ಡಿ.ಕೆ. ಶಿವಕುಮಾರ್ ಕೇವಲ ರಾಜಕಾರಣಿ ಅಲ್ಲ, ಅವರು ಒಂದು ಬ್ರ್ಯಾಂಡ್. ಬುದ್ಧಿವಂತಿಕೆ, ಸಹನೆ ಮತ್ತು ರಾಜಕೀಯ ಚಾಣಾಕ್ಷತನದಿಂದ ಅವರು ವಿಭಿನ್ನ ನಾಯಕ” ಎಂದು ಗುರೂಜಿ ಹೊಗಳಿದರು. ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದ ವೇಳೆ ಡಿಕೆಶಿಯಿಂದಲೇ ‘ಕೆಲಸ ಆಗಿದೆ’ ಎಂಬ ಕರೆ ಬಂದಿತ್ತೆಂದೂ ಅವರು ಬಹಿರಂಗಪಡಿಸಿದರು.



