ಬೆಂಗಳೂರು: ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನಟ ಪ್ರಕಾಶ್ ರಾಜ್ಗೆ ಬೆಂಗಳೂರಿನ ನ್ಯಾಯಾಲಯದಿಂದ ಬಿಗ್ ರಿಲೀಫ್ ಸಿಕ್ಕಿದೆ. 48ನೇ ಎಸಿಜೆಎಂ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿದೆ.
ನಟನ ವಿರುದ್ಧ ನಾಲ್ಕು ವೋಟರ್ ಐಡಿ ಹೊಂದಿರುವ ಆರೋಪದಡಿ ಖಾಸಗಿ ದೂರು ದಾಖಲಾಗಿದ್ದು, ಈ ಹಿಂದೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿತ್ತು. ವಾರಂಟ್ ರದ್ದುಗೊಳಿಸುವಂತೆ ಪ್ರಕಾಶ್ ರಾಜ್ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ನಟ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ವಾರಂಟ್ ರದ್ದುಗೊಳಿಸಿ, 4 ಸಾವಿರ ರೂಪಾಯಿ ನಗದು ಶ್ಯೂರಿಟಿ ನೀಡುವ ಷರತ್ತಿನೊಂದಿಗೆ ಜಾಮೀನು ಮಂಜೂರು ಮಾಡಿತು. ಬಳಿಕ ಪ್ರಕಾಶ್ ರಾಜ್ ನ್ಯಾಯಾಲಯದಿಂದ ನಿರ್ಗಮಿಸಿದರು.
ದಿಲೀಪ್ ರಾಜ್ ಎಂಬವರು ಪ್ರಕಾಶ್ ರಾಜ್ ವಿರುದ್ಧ ನಾಲ್ಕು ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಎಂದು ಆರೋಪಿಸಿ ಖಾಸಗಿ ದೂರು ದಾಖಲಿಸಿದ್ದರು.



