ಕಿರುತೆರೆಯ ‘ಕಾಮಿಡಿ ಕಿಲಾಡಿಗಳು’ ಶೋ ಮೂಲಕ ಜನಪ್ರಿಯರಾದ ಮಡೆನೂರು ಮನು ಇತ್ತೀಚೆಗೆ ವಿವಾದದ ಕೇಂದ್ರಬಿಂದುವಾಗಿದ್ದರು. ಅವರ ಸ್ನೇಹಿತೆಯೊಬ್ಬರು ಮನು ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದರೂ, ನಂತರ ಮನು ಅವರದ್ದೆನ್ನಲಾದ ಆಡಿಯೋವೊಂದು ವೈರಲ್ ಆಗಿ ಶಿವರಾಜ್ಕುಮಾರ್, ಧ್ರುವ ಸರ್ಜಾ ಮತ್ತು ದರ್ಶನ್ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿದ್ದರಿಂದ ಭಾರಿ ವಿರೋಧ ಹುಟ್ಟಿತ್ತು. ಇದರಿಂದಾಗಿ ಮನು ಅವರ ಮೇಲೆ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಚಿತ್ರರಂಗದಿಂದ ಅವರನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಈ ಮೂವರು ಸ್ಟಾರ್ ನಟರ ಬಳಿ ಕ್ಷಮೆ ಕೇಳಲು ಮನು ಮುಂದಾದರು. ಶಿವರಾಜ್ಕುಮಾರ್ ಅವರ ಮನೆ ಮುಂದೆ ಕಾದು ನಿಂತರೂ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಇದೀಗ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಅವರನ್ನು ಭೇಟಿಯಾಗಿ ಕ್ಷಮೆ ಪತ್ರ ಸಲ್ಲಿಸಿದ್ದಾರೆ.
ಈ ಪತ್ರ ಸ್ವೀಕರಿಸಿದ ಉಮೇಶ್ ಬಣಕಾರ್, ಮಡೆನೂರು ಮನು ಕ್ಷಮೆ ಕೇಳಿ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಅವರಿಗೆ ಒಂದು ಅವಕಾಶ ನೀಡುವುದಾಗಿ ಹೇಳಿದ್ದಾರೆ. ‘ಮನು ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಪ್ರಾಯಶ್ಚಿತ್ತ, ಪಾಪಪ್ರಜ್ಞೆ ಅವರಿಗೆ ಕಾಡಿದೆ. ಈ ಕ್ಷಮಾಪಣೆಯ ಕಾಗದ ನೀಡಿದ್ದಾರೆ. ಬಹಿರಂಗವಾಗಿ ಅವರು ಕ್ಷಮೆ ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಅವಕಾಶ ಮಾಡಿಕೊಡಿ ಅಂತ ಅವರು ಮನವಿ ಮಾಡಿದ್ದಾರೆ. ಅದನ್ನು ಪುರಸ್ಕರಿಸುತ್ತೇವೆ’ ಎಂದು ಉಮೇಶ್ ಬಣಕಾರ್ ಹೇಳಿದ್ದಾರೆ.
ಅಲ್ಲದೆ, “ಇದು ಕೊನೆಯ ಅವಕಾಶ. ಮುಂದೆ ಮತ್ತೊಂದು ವಿವಾದ ಎದುರಾದರೆ ಯಾರೂ ಕ್ಷಮಿಸಲಾರರು,” ಎಂದು ಮನುಗೆ ಬುದ್ಧಿವಾದ ಹೇಳಿದ್ದಾರೆ..