ಬೆಂಗಳೂರು: ಶುಕ್ರವಾರ ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಯಾವುದೇ ಸ್ಪಷ್ಟ ಬಹುಮತವಿಲ್ಲದೆ ಸೋಲಾಗಿದೆ. ಇದು ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದು, ಮಹಿಳಾ ಮೀಸಲಾತಿಗೆ ನಮ್ಮ ವಿರೋಧ ಇಲ್ಲ. 2023ರಲ್ಲೇ ಸಂಸತ್ನಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸ್ ಆಗಿತ್ತು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಹಿಳಾ ಮೀಸಲಾತಿ ವಿಧೇಯಕವನ್ನು ನಾವು ವಿರೋಧ ಮಾಡಿಲ್ಲ. ಈಗ ಮಹಿಳಾ ಮೀಸಲಾತಿ ವಿಧೇಯಕ, ಕ್ಷೇತ್ರ ಮರುವಿಂಗಡಣೆ ಬಿಲ್, ಕೇಂದ್ರಾಡಳಿತ ಪ್ರದೇಶಗಳ ಕಾನೂನು ತಿದ್ದುಪಡಿ ಬಿಲ್ಗಳನ್ನ ಒಟ್ಟಿಗೆ ಮಿಕ್ಸ್ ಮಾಡಿದ್ದರು.ಕೇವಲ ಮಹಿಳಾ ಮೀಸಲಾತಿ ವಿಧೇಯಕ ಒಂದೇ ಆಗಿದ್ದರೆ ಈಗಾಗಲೇ ಅದು ಅಂಗೀಕಾರವಾಗುತ್ತಿತ್ತು ಎಂದು ಸಿಎಂ ಹೇಳಿದ್ದಾರೆ. ಬಿಜೆಪಿಯವರು ರಾಜಕೀಯ ಮಾಡುವುದಕ್ಕಾಗಿ 3 ವಿಧೇಯಕ ಮಿಕ್ಸ್ ಮಾಡಿದ್ದರು. ನಾವು ಕ್ಷೇತ್ರ ಮರುವಿಂಗಡಣಾ ವಿಧೇಯಕಕ್ಕೆ ಮಾತ್ರ ವಿರೋಧಿಸಿದ್ದೇವೆ. ಮಹಿಳಾ ಮೀಸಲಾತಿ ವಿಧೇಯಕವನ್ನು ನಾವು ವಿರೋಧ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಇದೇ ವಿಚಾರವಾಗಿ ದೆಹಲಿಯಲ್ಲಿ ಪರಿಷತ್ನ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯಿಸಿದ್ದು, ವಿಧೇಯಕಕ್ಕೆ ಸೋಲಾಗಿಲ್ಲ, ಬಿಜೆಪಿಯ ಕುಟಿಲ ನೀತಿಗೆ ಸೋಲಾಗಿದೆ. ಲಕ್ಷಾಂತರ ಜನ ಕಷ್ಟಪಟ್ಟು ಸ್ವಾತಂತ್ರ್ಯ ಕೊಡಿಸಿದ ದೇಶದಲ್ಲಿ ಮೋಸದಿಂದ ಅಧಿಕಾರಕ್ಕೆ ಬರಲು ಸಂಚು ರೂಪಿಸಲಾಗಿತ್ತು ಎಂದು ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.



